ಬಂಟ್ವಾಳ: ಮನೆಯಲ್ಲಿದ್ದ ಲಕ್ಷಾಂತರ ರೂ. ಚಿನ್ನಾಭರಣ, ನಗದು ಕಳವು: ಮಂಜೇಶ್ವರ ಮೂಲದ ಇಬ್ಬರು ಆರೋಪಿಗಳ ಬಂಧನ
ಬಂಟ್ವಾಳ: ಮನೆಗೆ ಕನ್ನ ಹಾಕಿ ಲಕ್ಷಾಂತರ ರೂ. ನಗ ನಗದು ಕಳವು ಮಾಡಿದ್ದ ಕೇರಳ ಮಂಜೇಶ್ವರ ಮೂಲದ ಆರೋಪಿಗಳಿಬ್ಬರನ್ನು ಬಂಟ್ವಾಳ ಗ್ರಾಮಾಂತರ ಎಸ್.ಐ.ಹರೀಶ್ ನೇತೃತ್ವದ ತಂಡ ಬಂಧಿಸಿದ್ದು, ಆರೋಪಿಗಳಿಂದ ಕಳವುಗೈದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಜೇಶ್ವರ ಮೂಲದ ಪ್ರಸ್ತುತ ಫರಂಗಿಪೇಟೆ ಜುಮಾದಿಗುಡ್ಡೆ ನಿವಾಸಿ ಅಶ್ರಫ್ ಆಲಿ ಮತ್ತು ಬೆಂಗ್ರೆಯ ಕಬೀರ್ ಬಂಧಿತ ಆರೋಪಿಗಳು.
ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪುದು ಗ್ರಾಮದ ಕೋಡಿಮಜಲು ಎಂಬಲ್ಲಿಯ ಮೊಹಮ್ಮದ್ ಜಾಫರುಲ್ಲಾ ಇಮಾದ್ ಬಿಲ್ಡರ್ ಅವರ ಮನೆಯಿಂದ ನಗದು ಹಾಗೂ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿತ್ತು.
ಮೊಹಮ್ಮದ್ ಜಾಫರುಲ್ಲಾ ಅವರ ಜೊತೆಯಲ್ಲಿ ಸುಮಾರು 7-8 ತಿಂಗಳಿಂದ ಕಟ್ಟಡ ಕಾಮಗಾರಿಯ ಸಹಾಯಕನಾಗಿದ್ದ ಅಶ್ರಫ್ ಆಲಿ ಎಂಬಾತ ಸುಮಾರು 4-5 ತಿಂಗಳಿಂದ ಕಟ್ಟಡ ಕಾಮಗಾರಿಯ ಜೊತೆ ಅವರ ಮನೆಗೆಲಸ ಕೂಡ ಮಾಡಿಕೊಂಡಿದ್ದ.
ಜಾಫರುಲ್ಲಾ ಮತ್ತು ಅವರ ಮನೆಯವರ ಜೊತೆ ವಿಶ್ವಾಸದಿಂದ ಇದ್ದವನು. ಅ.18 ರಂದು ಮನೆಯವರು ಸಂಬಂದಿಕರ ಮನೆಗೆ ಹೋಗುವಾಗ ಮನೆಗೆ ಬೀಗ ಹಾಕಿ ಹೋಗಿದ್ದುರು.
ಮನೆಯ ಮಾಲಕ ಜಾಪರುಲ್ಲಾ ಅಗತ್ಯ ಕೆಲಸವಿದ್ದ ಬಗ್ಗೆ ಬೆಂಗಳೂರಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ವಿಶ್ವಾಸದ ವ್ಯಕ್ತಿಯಾಗಿರುವ ಆಶ್ರಫ್ ನಲ್ಲಿ ಮನೆಯ ಬೀಗದ ಕೀಯನ್ನು ನೀಡಿದ್ದರು.
ಮಾಲಕ ಸಹಿತ ಮನೆಯವರು ಅವರ ವೈಯಕ್ತಿಕ ಕೆಲಸ ಮುಗಿಸಿಕೊಂಡು ಆ. 23 ರಂದು ಕೋಡಿಮಜಲು ಮನೆಗೆ ಬಂದಾಗ ಮನೆಯ ಎದುರುಗಡೆ ಬಾಗಿಲಿಗೆ ಲಾಕ್ ಆಗಿದ್ದು, ಮನೆಯ ಬೀಗದ ಕೀ ಗಾಗಿ ಅಶ್ರಫ್ ಆಲಿಗೆ ಕರೆ ಮಾಡಿದಾಗ ಆತನ ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿತ್ತು.
ಸಂಶಯಗೊಂಡು ಮನೆಯ ಹೊರಗಿನಿಂದ ಕಿಟಕಿ ಮೂಲಕ ಇಣುಕಿ ನೋಡಿದಾಗ ಬೆಡ್ ರೂಮಿನಲ್ಲಿರುವ ಕಪಾಟಿನ ಬಾಗಿಲು ತೆರೆದಿದ್ದು ಕಂಡು ಬಂದು ಮನೆಯ ಒಳಗೆ ನೋಡಿದಾಗ ಮನೆಯ ರೂಂಗಳಲ್ಲಿದ್ದ ಗೋದ್ರೇಜ್ ಕಪಾಟಿನಿಂದ ನಗದು ರೂಪಾಯಿ 2750000/- 496000 /-ಮೌಲ್ಯದ ಚಿನ್ನಾಭರಣ ಗಳನ್ನು ಕಳವು ಮಾಡಿಕೊಂಡು ಹೋದ ಬಗ್ಗೆ ಗಮನಕ್ಕೆ ಬಂದು, ಬಳಿಕ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು.
ಆರೋಪಿ ಅಶ್ರಫ್ ಆಲಿ ಮತ್ತು ಬೆಂಗ್ರೆಯ ಕಬೀರ್ ಎಂಬಾತನನ್ನು ಪೊಲೀಸರು ಪತ್ತೆ ಹಚ್ಚಿ ಸುಮಾರು 4,50,000/- ಮೌಲ್ಯ ಚಿನ್ನ ಮತ್ತು ನಗದು 4,00,000/-ದನ್ನು ವಶಪಡಿಕೊಂಡಿರುತ್ತಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 8,50,000/ಆಗಿದೆ.
ಆರೋಪಿ ಮತ್ತು ಸೊತ್ತು ಪತ್ತೆಯ ಬಗ್ಗೆ ದ.ಕ ಪೊಲೀಸು ಅಧೀಕ್ಷಕರ ಮಾರ್ಗದರ್ಶನ, ಹೆಚ್ಚುವರಿ ಪೊಲೀಸು ಅಧೀಕ್ಷಕರ ನಿರ್ದೇಶನ, ಪೊಲೀಸ್ ಉಪಾಧೀಕ್ಷಕರ ಬಂಟ್ವಾಳ ಉಪ ವಿಭಾಗ ರವರ ಆದೇಶದಂತೆ ಬಂಟ್ವಾಳ ಗ್ರಾಮಾಂತರ ಅಧಿಕಾರಿಯವರು ಮತ್ತು ಸಿಬ್ಬಂದಿಯವರನ್ನು ಒಳಗೊಂಡ ಮತ್ತು ಜಿಲ್ಲಾ ಸಿ.ಡಿ.ಆರ್ ವಿಭಾಗದ ಸಿಬ್ಬಂದಿಗಳು ಸೇರಿ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ.




