ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಬಗ್ಗೆ ಸಿದ್ದರಾಮಯ್ಯ ಹೇಳಿದ್ದು ಹೀಗೆ…
ಮಂಗಳೂರು: ರಾಜ್ಯದಲ್ಲಿ ನಿಗಮ – ಮಂಡಳಿಗಳಿಗೆ ಶೀಘ್ರ ಅಧ್ಯಕ್ಷರ ನೇಮಕ ಮಾಡಲಾಗುವುದು. ಮೊದಲ ಹಂತದಲ್ಲಿ ಶಾಸಕರಿಗೆ ಆದ್ಯತೆ ನೀಡಿ, ಎರಡನೇ ಹಂತದಲ್ಲಿ ಕಾರ್ಯಕರ್ತರಿಗೆ ಅವಕಾಶ ನೀಡಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಂಗಳೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿ, ಸಿಎಂ ಅಂದ್ರೆ ಕಲೆಕ್ಷನ್ ಮಾಸ್ಟರ್ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹರೀಶ್ ಪೂಂಜಾ ಶಾಸಕನಾಗಿರೋದು ಮೊನ್ನೆ. ನಾನು1983ರಿಂದ ಶಾಸಕನಾಗಿ, 1985ರಲ್ಲಿ ಸಚಿವನಾಗಿದ್ದವನು. ಆವತ್ತು ಯಾರು ನನ್ನ ಈ ರೀತಿ ಕರೆದಿರಲಿಲ್ಲ.ಇವರು ಪಾಪ ಇನ್ನೂ ರಾಜಕೀಯದಲ್ಲಿ ಬಚ್ಚಾ ಎಂದರು.
ಸೌಜನ್ಯ ಕೊಲೆ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಿದೆ. ಹೀಗಾಗಿ ಮರು ತನಿಖೆ ಬಗ್ಗೆ ಕೇಂದ್ರ ಸರ್ಕಾರ ಯೋಚಿಸಬೇಕು ಎಂದರು.
ಗೃಹ ಸಚಿವರ ಮನೆಯ ಔತಣ ಕೂಟದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೈರಾಗಿದ್ದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಸಚಿವ ಜಿ. ಪರಮೇಶ್ವರ ಅವರು ಮನೆಗೆ ಊಟಕ್ಕೆ ಕರೆದಿದ್ದರು. ನಾನು ಮತ್ತು ಕೆಲವು ಸಚಿವರು ಹೋಗಿದ್ದೆವು. ಅಲ್ಲಿ ಯಾವುದೇ ರಾಜಕೀಯ ನಡೆದಿಲ್ಲ. ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಪ್ರತಿಕ್ರಿಯಿಸಿದರು.
50 ಕೋಟಿ ಆಫರ್ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ.ಯಾರು ಹೇಳಿದ್ರೋ ಅವರತ್ರ ಕೇಳಿ, ನನಗೆ ಯಾವುದೇ ಮಾಹಿತಿ ಬಂದಿಲ್ಲ.ಬಿಜೆಪಿಯವರು ನಮ್ಮ ಸರ್ಕಾರ ಅಸ್ಥಿರ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬರ ಪರಿಹಾರ 7900 ಕೋಟಿ ರೂ ಕೇಳಿದ್ದೇವೆ.ಆದರೆ ಕೇಂದ್ರ ಸರ್ಕಾರ ಒಂದು ರೂ. ಪರಿಹಾರ ಕೊಟ್ಟಿಲ್ಲ.ಕೇಂದ್ರ ಸರ್ಕಾರ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.