ಮುಲ್ಕಿ: ವಿಷಪೂರಿತ ಹಾವು ಕಡಿದು ದಿನಸಿ ವ್ಯಾಪಾರಿ ಸಾವು
ಮುಲ್ಕಿ: ವಿಷಪೂರಿತ ಹಾವು ಕಡಿದು ದಿನಸಿ ವ್ಯಾಪಾರಿಯೊಬ್ಬರು ಸಾವನ್ನಪ್ಪಿದ ಘಟನೆ ಮಂಗಳೂರು ಹೊರವಲಯದ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಬಳಕುಂಜೆ ಸಮೀಪದ ಕರ್ನೀರೆ ಎಂಬಲ್ಲಿ ನಡೆದಿದೆ.
ಮೃತರನ್ನು ಕರ್ನೀರೆ ಮಸೀದಿ ಬಳಿಯ ನಿವಾಸಿ ಸಯ್ಯದ್ ಆಲಿ (57) ಎಂದು ಗುರುತಿಸಲಾಗಿದೆ.
ಮೃತ ಸಯ್ಯದ್ ಆಲಿ ರವರು ತಮ್ಮ ತೋಟದಲ್ಲಿ ತರಕಾರಿ ಬೆಳೆಯನ್ನು ಮಾಡುತ್ತಿದ್ದು, ಅದರಂತೆ ಬೆಳಿಗ್ಗೆ ತೋಟದ ಕಡೆ ಹೋಗುವಾಗ ವಿಷಪೂರಿತ ಹಾವು ಕಚ್ಚಿದೆ ಎನ್ನಲಾಗಿದೆ.
ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸಯ್ಯದ್ ಆಲಿ ಕರ್ನೀರೆ ಅವರು ಪೇಟೆಯಲ್ಲಿ ಸುಮಾರು 50 ವರ್ಷಗಳಿಂದ ಸ್ವಂತ ದಿನಸಿ ಅಂಗಡಿ ನಡೆಸುತ್ತಿದ್ದರು. ಅವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.




