ಕಾಸರಗೋಡು: ಮನೆ ಸಮೀಪದ ಬಾವಿಯಲ್ಲಿ ಮಹಿಳೆಯ ಮೃತದೇಹ ಪತ್ತೆ
ಕಾಸರಗೋಡು: ಹತ್ತು ದಿನಗಳ ಬಾಣಂತಿಯೋರ್ವಳ ಮೃತದೇಹ ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾದ ಘಟನೆ ಕೂಡು ಪಾರೆಕಟ್ಟೆ ಬಳಿ ನಡೆದಿದೆ.
ಕಂಬಾರು ಬೆದ್ರಡ್ಕದ ಪೋಸ್ಟ್ ಮಾಸ್ತರ್ ವೃತ್ತಿಯಲ್ಲಿದ್ದ ಸುರೇಖ (29) ಮೃತಪಟ್ಟ ಯುವತಿ ಎಂದು ಗುರುತಿಸಲಾಗಿದೆ. ಜೋಡುಕಲ್ಲು ಸಮೀಪದ ಅರಿಯಾಳ ನಿವಾಸಿ ಜಯ್ ಕುಮಾರ್ ಆಚಾರ್ಯ ಎಂಬವರ ಪತ್ನಿಯಾದ ಸುರೇಖ ಕಳೆದ ಹತ್ತು ದಿನಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿ ಬಾಣಂತಿಯಾಗಿ ತವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ರಾತ್ರಿ ಊಟ ಮಾಡಿ ಮಲಗಿದ್ದ ಸುರೇಖ ಅವರ ಬಳಿ ಅವರ ತಾಯಿ, ಅತ್ತೆ ಹಾಗೂ ಸಮೀಪದ ಕೊಠಡಿಯಲ್ಲಿ ಪತಿ ಮಲಗಿದ್ದರು. ಕೆಲ ಸಮಯದ ಬಳಿಕ ಮಗು ಅಳುತ್ತಿದ್ದು ಮನೆಯವರು ಎದ್ದು ನೋಡಿದಾಗ ಸುರೇಖ ಮಲಗಿದ್ದಲ್ಲಿ ಇರಲಿಲ್ಲ ಬಳಿಕ ಹುಡುಕಾಡಿದಾಗ ಮನೆ ಸಮೀಪದ ಬಾವಿ ಬಳಿ ಟಾರ್ಚ್ ಲೈಟ್ ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ಮನೆಯವರು ಸಂಶಯಗೊಂಡು ಬಾವಿಯಲ್ಲಿ ಶೋಧ ಕಾರ್ಯ ನಡೆಸಿದಾಗ ಮೃತದೇಹ ಪತ್ತೆಯಾಗಿತ್ತು.




