ದಾರಿಯುದ್ದಕ್ಕೂ ರಂಪಾಟ, ಉಂಗುರ ನುಂಗಿ ಆತ್ಮಹತ್ಯೆಗೂ ಯತ್ನಿಸಿದ ಚೈತ್ರಾ ಕುಂದಾಪುರ
ಉಡುಪಿ: ನಿನ್ನೆ ತಡರಾತ್ರಿ ಬಂಧಿತಳಾಗಿರುವ ಬಾಡಿಗೆ ಭಾಷಣಕಾರ್ತಿ, ಸಂಘಪರಿವಾರದ ಚೈತ್ರಾ ಕುಂದಾಪುರ ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ ರಂಪಾಟಗಳನ್ನು ನಡೆಸಿರುವುದು ಬೆಳಕಿಗೆ ಬಂದಿದೆ.
ಪ್ರಸ್ತುತ ಪೊಲೀಸರು ಆಕೆಯನ್ನು ಹೆಚ್ಚಿನ ತನಿಖೆಗಾಗಿ ಬೆಂಗಳೂರಿಗೆ ಕರೆದೊಯ್ಯುತ್ತಿದ್ದು, ದಾರಿಯುದ್ದಕ್ಕೂ ರಂಪಾಟ ನಡೆಸಿರುವುದು ತಿಳಿದು ಬಂದಿದೆ. ಅದೂ ಸಾಲದೆಂಬಂತೆ ಉಂಗುರ ನುಂಗಿ ಆತ್ಮಹತ್ಯೆಗೂ ಪ್ರಯತ್ನಿಸಿದ ಕುರಿತು ವರದಿಯಾಗಿದೆ.
ಬಾಬು ಗೋವಿಂದ ಪೂಜಾರಿ ಎನ್ನುವ ಉದ್ಯಮಿಯೊಬ್ಬರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಎಮ್ಮಲ್ಲೆ ಟಿಕೆಟ್ ಕೊಡಿಸುವುದಾಗಿ ಹೇಳಿ ಏಳು ಕೋಟಿ ವಂಚಿಸಿದ ಪ್ರಕರಣದಲ್ಲಿ ಪೊಲೀಸರು ಚೈತ್ರಾ ಕುಂದಾಪುರ ಹಾಗೂ ಆಕೆಯ ಸಹಚರರನ್ನು ವಶಕ್ಕೆ ಪಡೆದಿರುತ್ತಾರೆ.
ಹೀಗೆ ಬಂಧಿಸಿದ ಆಕೆಯನ್ನು ಬೆಂಗಳೂರಿಗೆ ಕರೆದೊಯ್ಯುವಾಗ ಮೇಲಿನ ಘಟನೆ ನಡೆದಿದೆಯೆಂದು ತಿಳಿದುಬಂದಿದೆ. ಪೊಲೀಸರು ಆಕೆಯ ಪ್ರಯತ್ನವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗಿದೆ.
ಅಲ್ಲದೆ ಆಕೆ ತನ್ನನ್ನು ಒಯ್ಯುತ್ತಿದ್ದ ಕಾರಿನ ಗಾಜನ್ನೂ ಒಡೆಯಲು ಪ್ರಯತ್ನಿಸಿದ್ದಾಗಿ ಸುದ್ದಿ ಬರುತ್ತಿದೆ. ಪ್ರಸ್ತುತ ಆಕೆಯನ್ನು ಪೊಲೀಸರು ಬೆಂಗಳೂರಿಗೆ ಕರೆತರುತ್ತಿದ್ದು, ಸಂಜೆ ನ್ಯಾಯಾಧೀಶರ ಮುಂದೆ ಹಾಜರಿಪಡಿಸುವ ಸಾಧ್ಯತೆಯಿದೆ.
ಉದ್ಯಮಿಗೆ ಎಂಎಲ್ಎ ಟಿಕೆಟ್ ಕೊಡಿಸುವುದಾಗಿನಂಬಿಸಿ ಬಹುಕೋಟಿ ರೂಪಾಯಿ ವಂಚಿಸಿರುವ ಆರೋಪದ ಮೇಲೆ ಬಾಡಿಗೆ ಭಾಷಣಗಾರ್ತಿ, ಸಂಘಪರಿವಾರದ ಚೈತ್ರಾ ಕುಂದಾಪುರ ಸೇರಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಮಾಜಸೇವಕರಾಗಿ ಗುರುತಿಸಿಕೊಂಡಿರುವ ಬೈಂದೂರಿನ ಉದ್ಯಮಿ, ಬಿಲ್ಲವ ನಾಯಕ ಗೋವಿಂದಬಾಬು ಪೂಜಾರಿ. ಈ ಬಾರಿ ಚುನಾವಣೆ ಸ್ಪರ್ಧಾಕಾಂಕ್ಷಿಯಾಗಿದ್ದರು. ಟಿಕೆಟ್ ಪಡೆಯಲು ಕಸರತ್ತು ನಡೆಸಿದ್ದ ಉದ್ಯಮಿ. ಇದೇ ಅವಕಾಶ ಬಳಸಿಕೊಂಡು ಉದ್ಯಮಿಗೆ ಬೈಂದೂರು ಟಿಕೆಟ್ ಪಕ್ಕಾ ಕೊಡಿಸುವುದಾಗಿ ನಂಬಿಸಿರುವ ಚೈತ್ರಾ ಕುಂದಾಪುರ ಮತ್ತವರ ತಂಡ.
ಕೇಂದ್ರದ ನಾಯಕರು, ಆರೆಸ್ಸೆಸ್ ನಾಯಕರು ಎಂಬಂತೆ ನಾಲ್ಕೈದು ಜನರ ತಂಡದಿಂದ ಬೃಹನ್ನಾಟಕ ನಡೆಸಿ ಗಣ್ಯರ ಹೆಸರಲ್ಲಿ ಪಂಗನಾಮ ಹಾಕಿರುವ ಗ್ಯಾಂಗ್. ಟಿಕೆಟ್ ಕೊಡಿಸುವುದಾಗಿ ಹಂತಹಂತವಾಗಿ 7ಕೋಟಿ ರೂಪಾಯಿ ಪೀಕಿದ್ದಾರೆಂದು ಆರೋಪಿಸಿರುವ ಉದ್ಯಮಿ ಗೋವಿಂದ ಬಾಬು ಪೂಜಾರಿ.
ಸದ್ಯ ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ, ಗಗನ್ ಕಡೂರು, ಶ್ರೀಕಾಂತ ನಾಯಕ್, ಪ್ರಸಾದ್ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದಿರುವ ಪೊಲೀಸರು. ಹೆಚ್ಚಿನ ವಿಚಾರಣೆಗಾಗಿ ಇಬ್ಬರು ಆರೋಪಿಗಳನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿರೋ ಸಿಸಿಬಿ ಪೊಲಿಸರು.




