ಮಡಿಕೇರಿ: ಏಡಿ ಹಿಡಿಯಲು ಹೋಗಿ ನೀರು ಪಾಲದ ಬಾಲಕ
ಮಡಿಕೇರಿ: ನೃತ್ಯದ ಮೂಲಕ ಭಾರತ ದೇಶವನ್ನು ಪ್ರತಿನಿಧಿಸುವ ಕನಸು ಕಂಡಿದ್ದ ಬಾಲಕನೋರ್ವ ಬುಧವಾರ ನಾಲೆಯಲ್ಲಿ ಏಡಿ ಹಿಡಿಯಲು ಹೋಗಿ ನೀರು ಪಾಲದ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಹಾರಂಗಿ ಜಲಾಶಯದ ನಾಲೆ ಬಳಿ ನಡೆದಿದೆ. ಅನಿತ್ ನಾಲೆಗೆ ಬಿದ್ದು ಮೃತಪಟ್ಟ ದುರ್ದೈವಿಯಾಗಿದ್ದಾನೆ.
ಬೆಳಗ್ಗೆ 8:30ರ ಸುಮಾರಿಗೆ ಬ್ಯಾಡಗೂಟ್ಟದಲ್ಲಿರುವ ದಿಡ್ಡಳ್ಳಿ ನಿರಾಶ್ರಿತರ ಕೇಂದ್ರದ ಬಳಿಯಿಂದ ಸ್ನೇಹಿತರೊಂದಿಗೆ ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಹಾರಂಗಿ ನಾಲೆಯಲ್ಲಿ ಏಡಿಯೊಂದು ಅನಿತ್ಗೆ ಗೋಚರಿಸಿದೆ.
ಈ ವೇಳೆ ಅನಿತ್ ತನ್ನ ಗೆಳೆಯರಿಗೆ ಏಡಿ ಹಿಡಿದುಕೊಂಡು ಬರುವೆ, ಸ್ವಲ್ಪ ಸಮಯ ಕಾಯಿರಿ ಎಂದು ನಾಲೆ ಸಮೀಪವೇ ಬಟ್ಟೆ, ಶಾಲಾ ಬ್ಯಾಗ್ ಇಟ್ಟು ಹೋಗಿದ್ದಾನೆ.
ಆದರೆ ಆಕಸ್ಮಿಕವಾಗಿ ಕಾಲು ಜಾರಿ ನಾಲೆಯಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಅನಿತ್ ಸ್ನೇಹಿತರು ಆತನನ್ನು ರಕ್ಷಣೆ ಮಾಡಲು ಮುಂದಾದರೂ ಯಾವುದೇ ಪ್ರಯೋಜನವಾಗಿಲ್ಲ.




