February 4, 2026

ಉಳ್ಳಾಲ: ಬೇಕರಿ ಅಂಗಡಿ ಮಾಲೀಕ ಆತ್ಮಹತ್ಯೆ

0
image_editor_output_image1362388098-1692674872504.jpg


ಉಳ್ಳಾಲ: ಎರಡು ಬೇಕರಿ ಅಂಗಡಿ ಮಾಲೀಕ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಳ್ಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯ ಕುತ್ತಾರು ಸಮೀಪದ ಶಾಂತಿಬಾಗ್ ಎಂಬಲ್ಲಿ ಇಂದು ಸಂಜೆ ವೇಳೆ ಬೆಳಕಿಗೆ ಬಂದಿದೆ.

ಹಾಸನ ಜಿಲ್ಲೆ ಹಳೇಬೀಡು ರಸ್ತೆಯ ಬಲ್ಲೇನಹಳ್ಳಿ ನಿವಾಸಿ ರುದ್ರೇಶ್‌ (೩೬) ಆತ್ಮಹತ್ಯೆ ಮಾಡಿಕೊಂಡವರು. ಮೃತರು ಮಕ್ಕಳಾದ ೮ನೇ ತರಗತಿ ಕಲಿಯುವ ಪೂರ್ವಿಕಾ, ೪ನೇ ತರಗತಿ ವಿದ್ಯಾರ್ಥಿ ನಿಶ್ಚಿತಾ ಹಾಗೂ ಪತ್ನಿ ಹೇಮಲತಾ ಜೊತೆಗೆ ಶಾಂತಿಬಾಗ್‌ ಬಳಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಈ ಹಿಂದೆ ಸಂತೋಷನಗರ ಎಂಬಲ್ಲಿದ್ದವರು ಕೆಲ ದಿನಗಳ ಹಿಂದಷ್ಟೇ ಇಲ್ಲಿನ ಬಾಡಿಗೆ ಮನೆಗೆ ಬಂದಿದ್ದರು. ಹಾಸನದಿಂದ ೧೨ ವರ್ಷಗಳ ಹಿಂದೆ ಬಂದಿದ್ದ ರುದ್ರೇಶ್‌
ಕುತ್ತಾರು ಹಾಗೂ ಯೆನೆಪೋಯ ಆಸ್ಪತ್ರೆ ಬಳಿ ಬೆಂಗಳೂರ್‌ ಅಯ್ಯಂಗಾರ್‌ ಬೇಕರಿಯನ್ನು ನಡೆಸುತ್ತಾ ಬಂದಿದ್ದರು. ಇಂದು ಬೆಳಿಗ್ಗೆ ಬೇಕರಿಯಿಂದ ಮನೆಗೆ ಚಹಾ ಕುಡಿಯಲೆಂದು ಬಂದವರು ವಾಪಸ್ಸು ಹೋಗಿರಲಿಲ್ಲ. ಮನೆಯಲ್ಲಿ
ಪತಿ ರುದ್ರೇಶ್‌ ಒಂದು ಕೋಣೆಯಲ್ಲಿ ಮಲಗಿದ್ದರೆ, ಪತ್ನಿ ಹೇಮಲತಾ ಇನ್ನೊಂದು ಕೋಣೆಯಲ್ಲಿ ಮಲಗಿದ್ದರು. ಸಂಜೆ ಪತ್ನಿ ಹೇಮಲತಾ ನಿದ್ರೆಯಿಂದ ಎದ್ದಾಗ ಪತಿ ಏಳದೇ ಇರುವುದನ್ನು ಗಮನಿಸಿ ಬಾಗಿಲು ಮುರಿದು ನೋಡಿದಾಗ ರುದ್ರೇಶ್‌ ಕೋಣೆಯೊಳಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ರುದ್ರೇಶ್‌ ಹೃದಯಸಂಬಂಧಿ ಕಾಯಿಲೆಗೆ ಆಗಾಗ್ಗ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಪತ್ನಿ ಹೇಮಲತಾ ಕೆಲ ದಿನಗಳ ಹಿಂದೆಯಷ್ಟೇ ಕಿವಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ರುದ್ರೇಶ್‌ ಸಹೋದರಿ ಅವರೂ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಬಂದವರು ಸಹೋದರನ ಮನೆಯಲ್ಲಿ ಪುತ್ರನ ಜತೆಗೆ ಎರಡು ದಿನಗಳಿಂದ ಉಳಿದುಕೊಂಡಿದ್ದರು. ಘಟನೆ ವೇಳೆ ಸಹೋದರಿ ಮತ್ತು ಕಿರಿಯ ಮಗಳು ನಿಶ್ಚಿತಾ ಯೆನೆಪೋಯ ಆಸ್ಪತ್ರೆ ಬಳಿಯ ಬೇಕರಿಯಲ್ಲಿದ್ದರೆ, ಸಹೋದರಿಯ ಪುತ್ರ ಕುತ್ತಾರು ಬೇಕರಿಯಲ್ಲಿ ಇದ್ದರು. ದೊಡ್ಡ ಮಗಳು ಪೂರ್ವಿಕ ಹಾಗೂ ಪತ್ನಿ ಹೇಮಲತಾ ಮನೆಯಲ್ಲೇ ಇದ್ದರು. ಮೃತರು ಎಲ್ಲರೊಂದಿಗೆ ಆತ್ಮೀಯತೆಯಿಂದಿದ್ದು, ಕೆಲ ವರ್ಷಗಳಲ್ಲೇ ಹಲವರ ಸ್ನೇಹ ಸಂಪಾದಿಸಿದ್ದರು.

ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

Leave a Reply

Your email address will not be published. Required fields are marked *

You may have missed

error: Content is protected !!