ಉಡುಪಿ: ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿದು ಪರಾರಿ, ಆರೋಪಿಗಳ ಬಂಧನ
ಉಡುಪಿ : ಕುಂಜಾರುಗಿರಿ ಸಮೀಪದ ಪಾಜಕದಲ್ಲಿ ಮದುವೆ ಕಾರ್ಯಕ್ರಮಕ್ಕೆ ಹೋಗಿ ಮರಳುತ್ತಿದ್ದ ಬ್ರಾಹ್ಮಣರತೋಟ ನಿವಾಸಿ ಶಕುಂತಳಾ ಜಿ. ಭಟ್ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಸುಲಿಗೆ ನಡೆಸಿ ಪರಾರಿಯಾಗಿದ್ದ ಆರೋಪಿಗಳನ್ನು ಪಡುಬಿದ್ರಿಯಲ್ಲಿ ಕಾಪು ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಬಿ.ಸಿ.ರೋಡ್ ನಿವಾಸಿ ಮಹಮ್ಮದ್ ರಫೀಕ್ (33) ಮತ್ತು ಸುರತ್ಕಲ್ ಚೊಕ್ಕಬೆಟ್ಟು ನಿವಾಸಿ ತೌಸಿಫ್ ಸಾಧಿಕ್ (31)ಬಂಧಿತ ಆರೋಪಿಗಳಾಗಿದ್ದು, ಕೃತ್ಯಕ್ಕೆ ಬಳಸಿದ ಬೈಕ್, 3 ಮೊಬೈಲ್, 2,500 ರೂ. ನಗದು, ಬಟನ್ ಇದ್ದ ಎರಡು ಚೂರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು ಅಂತರ್ ಜಿಲ್ಲಾ ಸರಗಳ್ಳರಾಗಿದ್ದಾರೆ. ಬಂದಿತರ ಪೈಕಿ ಮಹಮ್ಮದ್ ರಫೀಕ್ನ ವಿರುದ್ಧ ಬೆಂಗಳೂರು, ಮಂಗಳೂರು ಕಮಿಷನರೇಟ್ ವ್ಯಾಪ್ತಿ, ದ.ಕ. ಮತ್ತು ಉಡುಪಿ ಜಿಲ್ಲೆಯ 32 ಠಾಣೆಗಳಲ್ಲಿ ಸರಗಳ್ಳತನ ಪ್ರಕರಣ ದಾಖಲಾಗಿದ್ದು ಬೆಂಗಳೂರಿನಲ್ಲಿ ಒಮ್ಮೆ ಆರು ವರ್ಷ ಹಾಗೂ ಮತ್ತೂಮ್ಮೆ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ.
ಮಾರ್ಚ್ ತಿಂಗಳಲ್ಲಿ ಜಾಮೀನು ಪಡೆದು ಹೊರಬಂದಿದ್ದು ಮತ್ತೆ ಅದೇ ಮಾದರಿಯ ಕಳ್ಳತನ ನಡೆಸಿ ಪೊಲೀಸರ ಸೆರೆಯಾಗಿದ್ದಾನೆ.
ಮತ್ತೋರ್ವ ಆರೋಪಿ ತೌಸಿಫ್ ಸಾಧಿಕ್ ವಿರುದ್ಧ ಬೆಂಗಳೂರು, ಮಂಗಳೂರು ಮತ್ತು ಮೂಲ್ಕಿ ಠಾಣೆಗಳಲ್ಲಿ ನಾಲ್ಕು ಸರಗಳ್ಳತನ ಪ್ರಕರಣಗಳು ದಾಖಲಾಗಿವೆ.




