ಉಳ್ಳಾಲ: ಹರೇಕಳ ಗ್ರಾಮದಲ್ಲಿ ನಿರ್ಮಾಣವಾಗಿದ್ದ ಸೇತುವೆಯ ಗೇಟ್ ತೆರೆದು ಸಂಚಾರಕ್ಕೆ ಅವಕಾಶ: ಡಿವೈಎಫ್ಐ ಕಾರ್ಯಕರ್ತರ ವಿರುದ್ಧ FIR ದಾಖಲು
ಉಳ್ಳಾಲ: ತಾಲೂಕಿನ ಹರೇಕಳ ಗ್ರಾಮದಲ್ಲಿ ನಿರ್ಮಾಣವಾಗಿದ್ದ ಸೇತುವೆಯ ಗೇಟ್ ತೆರೆದು ಸಂಚಾರಕ್ಕೆ ಅವಕಾಶ ಕಲ್ಪಿಸಿದ ಡಿವೈಎಫ್ಐ ಕಾರ್ಯಕರ್ತರ ಮೇಲೆ ತಿಂಗಳ ಬಳಿಕ ಕೊಣಾಜೆ ಠಾಣೆಯಲ್ಲಿ FIR ದಾಖಲಾಗಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಡಿವೈಎಫ್ ಐ ನಾಯಕ ಮುನೀರ್ ಕಾಟಿಪಳ್ಳ, ಈ ಹಿಂದೆ ಗೇಟ್ ತೆರವುಗೊಳಿಸಿದ ಸಂದರ್ಭ ಅಧಿಕಾರಿಗಳು ದೂರು ನೀಡಿದ್ದರೂ ಕಾನೂನು ಉಲ್ಲಂಘನೆಯ ಅಂಶಗಳು ಇಲ್ಲದ್ದರಿಂದ ಪೊಲೀಸರು ಎಫ್ ಐಆರ್ ಹಾಕದೆ ಹೇಳಿಕೆ ಪಡೆದು ಪ್ರಕರಣ ಮುಕ್ತಾಯಗೊಳಿಸಿದ್ದರು. ಇದೀಗ ಘಟನೆ ನಡೆದು ತಿಂಗಳ ತರುವಾಯ ಹೊಸದಾಗಿ ಎಫ್ ಐಆರ್ ಹಾಕಲಾಗಿದೆ.
ಸಿಪಿಐಎಂ, ಡಿವೈಎಫ್ಐ ಕಾರ್ಯಕರ್ತರು ಜಿಲ್ಲೆಯಾದ್ಯಂತ ಬಿಜೆಪಿ ಸೋಲಿಸಲು ಪೂರ್ಣಪ್ರಮಾಣದಲ್ಲಿ ಓಡಾಡುತ್ತಿದ್ದಾರೆ.
ಜಾತ್ಯಾತೀತ ಅಭ್ಯರ್ಥಿಗಳ ಪರವಾಗಿ ಪರಿಣಾಮಕಾರಿ ಪ್ರಚಾರ ನಡೆಸುತ್ತಿದ್ದಾರೆ. ಇದು ಬಿಜೆಪಿ ನಾಯಕರ ಕಣ್ಣು ಕೆಂಪಗಾಗಿಸಿದೆ. ಉಳ್ಳಾಲದಲ್ಲಿಯೂ ಸಿಪಿಎಂ, ಡಿವೈಎಫ್ಐ ಚುನಾವಣಾ ತಂತ್ರಗಳು ಬಿಜೆಪಿ ಲೆಕ್ಕಾಚಾರವನ್ನು ಉಲ್ಟಾ ಹೊಡೆಸುತ್ತಿದೆ.
ಅದರ ಪರಿಣಾಮ ಡಿವೈಎಫ್ಐ ಕಾರ್ಯಕರ್ತರ ಮೇಲೆ ಸುಳ್ಳು ಎಫ್ ಐಆರ್ ದಾಖಲಿಸಿ ಅಧಿಕಾರಿಗಳು ಬಿಜೆಪಿ ನಾಯಕರ ಮಾತಿಗೆ ಇನ್ಜೂ ಕಿವಿಗೊಡುತ್ತಿರುವುದು ಅಚ್ಚರಿಯ ಸಂಗತಿ ಎಂದು ತಿಳಿಸಿದ್ದಾರೆ.




