ಸತ್ಯಜಿತ್ ಸುರತ್ಕಲ್ ಬಗ್ಗೆ ಅವಹೇಳನಕಾರಿ ಹೇಳಿಕೆ: ಹರೀಶ್ ಪೂಂಜಾ ವಿರುದ್ಧ ಬಿಲ್ಲವ ಸಂಘಟನೆ ಆಕ್ರೋಶ
ಬೆಳ್ತಂಗಡಿ: ಸಾಮಾಜಿಕ ಜಾಲತಾಣದಲ್ಲಿ ಬಿಲ್ಲವ ಸಮಾಜದ ಮುಖಂಡ ಸತ್ಯಜಿತ್ ಸುರತ್ಕಲ್ ಅವರನ್ನು ಬೆಳ್ತಂಗಡಿ ಶಾಸಕರು ಹಾಗೂ ಇವರ ಬೆಂಬಲಿಗರು ತೇಜೋವಧೆ ಮಾಡುತ್ತಿದ್ದು ಇದು ಮುಂದುವರಿದರೆ ಸೂಕ್ತ ಕಾನೂನು ಕ್ರಮಗಳ ಉತ್ತರದ ಜತೆ ಬಿಲ್ಲವ ಸಮಾಜದ ಉಗ್ರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ, ಯುವವಾಹಿನಿ ಘಟಕ ಎಚ್ಚರಿಕೆಯನ್ನು ನೀಡಿವೆ.
ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಸಂಘಟನೆಗಳ ಪರವಾಗಿ ಯುವವವಾಹಿನಿ ಕೇಂದ್ರ ಸಮಿತಿ ಕೋಶಾಧಿಕಾರಿ ಪ್ರಸಾದ್ ಎಂ.ಕೆ. ಮಾತನಾಡಿ, ಶಾಸಕ ಹರೀಶ್ ಪೂಂಜಾರು ಕಳೆದ 5 ವರ್ಷಗಳಿಂದ ಅನೇಕ ರೀತಿಯಲ್ಲಿ ಬಿಲ್ಲವ ಸಮಾಜವನ್ನು ತುಳಿಯುತ್ತಿದ್ದಾರೆ. ಅದರ ಮುಂದುವರಿದ ಭಾಗವಾಗಿ ಪ್ರಕಾಶ್ ಕೋಟ್ಯಾನ್’ ಎನ್ನುವ ನಕಲಿ ಹೆಸರಿನ ಫೇಸ್ಬುಕ್ ಖಾತೆಯಿಂದ ಸತ್ಯಜಿತ್ ಸುರತ್ಕಲ್ ರನ್ನು ಕೀಳು ಮಟ್ಟದ ಶಬ್ದಗಳಿಂದ, ಏಕವಚನದಿಂದ ನಿಂದಿಸಿ ತೇಜೋವಧೆ ಮಾಡುತ್ತಿರುವುದು ಅಕ್ಷಮ್ಯ ಅಪರಾಧ. ಈ ನಕಲಿ ಖಾತೆಯ ಕವರ್ ಫೋಟೋದಲ್ಲಿ ಶಾಸಕ ಹರೀಶ್ ಪೂಂಜ ಮತ್ತು ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ ರ ಭಾವಚಿತ್ರ ಇದ್ದು ಈ ಖಾತೆಯಿಂದ ಹಲವು ಬಾರಿ ನಮ್ಮ ಸಮಾಜದ ಮುಖಂಡರನ್ನು ಅವಹೇಳನ ಮಾಡಿ ಬಿಲ್ಲವ ಸಮಾಜ ಮತ್ತು ಧಮನಿತ ಸಮಾಜದ ಮಧ್ಯೆ ಗೊಂದಲವನ್ನು ಮೂಡಿಸುತ್ತಿದ್ದಾರೆ ಎಂದರು.




