February 3, 2026

ಸುಳ್ಯ: ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ವಿವಾದ ರಮಾನಾಥ ರೈ ನೇತೃತ್ವದಲ್ಲಿ ಅಭಿಪ್ರಾಯ ಸಂಗ್ರಹ: ಶೇ. 90 ರಷ್ಟು ಮಂದಿಯಿಂದ ನಂದಕುಮಾರ್ ಪರ ಒಲವು

0
IMG-20230416-WA0001.jpg

ಸುಳ್ಯ: ಸುಳ್ಯದಲ್ಲಿ ಕಾಂಗ್ರೆಸ್ ಘೋಷಿತ ಅಭ್ಯರ್ಥಿ ಜಿಗಣಿ ಕೃಷ್ಣಪ್ಪ ವಿರುದ್ಧ ಕಾರ್ಯಕರ್ತರು ಬಂಡಾಯ ಎದ್ದಿರುವ ಬಗ್ಗೆ ಸುಳ್ಯದ ಚುನಾವಣಾ ಕಚೇರಿಯಲ್ಲೇ ಅಭಿಪ್ರಾಯ ಸಂಗ್ರಹ ನಡೆಯಿತು. ಮಾಜಿ ಸಚಿವ ರಮಾನಾಥ ರೈ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮತ್ತು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದರು.

ಸಭೆಯಲ್ಲಿ 400ಕ್ಕೂ ಹೆಚ್ಚು ಕಾರ್ಯಕರ್ತರು ಸೇರಿದ್ದರು. ಸೇರಿದ ಕಾರ್ಯಕರ್ತರ ಪೈಕಿ 90 ಶೇಕಡಾ ಮಂದಿ ನಂದಕುಮಾರ್ ಅವರೇ ತಮ್ಮ ಅಭ್ಯರ್ಥಿಯಾಗಬೇಕೆಂದು ಅಹವಾಲು ಮಂಡಿಸಿದ್ದಾರೆ. ಈ ನಡುವೆ, ಕಾಂಗ್ರೆಸ್ ಮುಖಂಡ ಧನಂಜಯ ಅಡ್ಪಂಗಾಯ ಅವರು ಕಾರ್ಯಕರ್ತರ ಅಭಿಪ್ರಾಯ ಕೇಳಬೇಕಿಲ್ಲ. ಮುಖಂಡರ ಅಭಿಪ್ರಾಯ ಮಾತ್ರ ಸಾಕು ಎಂದು ಹೇಳಿದ್ದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು. ಕೆಲಹೊತ್ತು ಅಡ್ಪಂಗಾಯ ಮತ್ತು ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ರಮಾನಾಥ ರೈ ಪ್ರತಿಕ್ರಿಯಿಸಿ, ನಾವೆಲ್ಲ ಕಾಂಗ್ರೆಸಿಗರು. ಪಕ್ಷದ ಕಾರ್ಯಕರ್ತರು. ಮುಖಂಡರು ಎನ್ನುವ ಭೇದ ಇಲ್ಲ. ಎಲ್ಲರ ಅಭಿಪ್ರಾಯಕ್ಕೂ ಸಮಾನ ಆದ್ಯತೆ ಇದೆ. ನನಗೆ ವಸ್ತುಸ್ಥಿತಿಯ ವರದಿ ಕೊಡಲು ಹೇಳಿದ್ದಾರೆ. ಯಥಾವತ್ ವರದಿಯನ್ನು ಕೊಡುತ್ತೇನೆ ಎಂದು ಹೇಳಿದರು.

ಭರತ್ ಮುಂಡೋಡಿ, ಧನಂಜಯ ಅಡ್ಪಂಗಾಯ ಮತ್ತಿತರರು ಸೇರಿ ಕೆಲವು ನಾಯಕರಷ್ಟೇ ಕೃಷ್ಣಪ್ಪ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ಸಾಮಾನ್ಯ ಕಾರ್ಯಕರ್ತರಿಂದ ತೊಡಗಿ ಕಡಬ ಮತ್ತು ಸುಳ್ಯ ಬ್ಲಾಕ್ ಮಟ್ಟದ ನಾಯಕರೆಲ್ಲ ನಂದಕುಮಾರ್ ಪರವಾಗಿ ಅಭಿಪ್ರಾಯ ಹೇಳಿದರು. ಸಭೆಯಲ್ಲಿ ನಂದಕುಮಾರ್ ಕೂಡ ಉಪಸ್ಥಿತರಿದ್ದರು. ಜಿಗಣಿ ಕೃಷ್ಣಪ್ಪ ಸುಳ್ಯ ಕ್ಷೇತ್ರದಲ್ಲಿ ಇದ್ದರೂ, ಸಭೆಗೆ ಬಂದಿರಲಿಲ್ಲ. ಸುಳ್ಯದಲ್ಲಿ ಘೋಷಿತ ಅಭ್ಯರ್ಥಿ ಕೃಷ್ಣಪ್ಪ ವಿರುದ್ಧ ಕಾರ್ಯಕರ್ತರ ಅಸಹಕಾರ, ಆಕ್ರೋಶದ ಹಿನ್ನೆಲೆಯಲ್ಲಿ ಕ್ಷೇತ್ರದ ವಸ್ತುಸ್ತಿತಿ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ವರದಿ ಕೊಡಲು ಮಾಜಿ ಸಚಿವ ರಮಾನಾಥ ರೈಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೂಚಿಸಿದ್ದರು.

Leave a Reply

Your email address will not be published. Required fields are marked *

error: Content is protected !!