ಪುತ್ತೂರು:ಕಾಂಗ್ರೆಸ್ ಅಭ್ಯರ್ಥಿಯಾಗಿ ಅಶೋಕ್ ರೈ ಕೊಡಿಂಬಾಡಿ: ಅಧಿಕೃತವಾಗಿ ಘೋಷಣೆ ಮಾಡಿದ ಕಾಂಗ್ರೆಸ್
ಪುತ್ತೂರು : ವಿಧಾನ ಸಭಾ ಚುನಾವಣಾ ದಿನಾಂಕ ಈಗಾಗಲೇ ಘೋಷಣೆಯಾಗಿದ್ದು, ಪುತ್ತೂರಿನ ಕಾಂಗ್ರೆಸ್ ಅಭ್ಯರ್ಥಿಯ ಹೆಸರು ಬಹಳ ಕುತೂಹಲಕಾರಿಯಾಗಿತ್ತು. ಮೊದಲ ಮತ್ತು ಎರಡನೇ ಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರನ್ನು ಬಹಿರಂಗಗೊಳಿಸದ ಕೈ ಪಾಳಯ ಮೂರನೇ ಪಟ್ಟಿಯಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿದೆ.
ಈ ಬಾರಿಯ ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಾಮಾಜಿಕ, ಧಾರ್ಮಿಕ ಮುಂದಾಳು ಅಶೋಕ್ ಕುಮಾರ್ ರೈ ಯವರ ಹೆಸರು ಪ್ರಕಟಗೊಂಡಿದೆ.
ಹಲವು ವರ್ಷಗಳಿಂದ ತನ್ನ ರೈ ಎಸ್ಟೇಟ್ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್(ರಿ.) ಮೂಲಕ ಹಲವಾರು ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲದೆ ಬಡವರ್ಗದ ಮನೆಯ ಹೆಣ್ಣು ಮಕ್ಕಳ ಮದುವೆ ಸಹಕಾರ, ಬಡವರ್ಗದ ಕುಟುಂಬದಲ್ಲಿ ಯಾರದರೂ ಅನಾರೋಗ್ಯದಿಂದಿದ್ದರೆ ಅವರ ಚಿಕಿತ್ಸೆ ಸಹಾಯ, ಮಳೆಯಿಂದಾಗಿ ಬಡ ವರ್ಗದವರ ಮನೆ ಕುಸಿದು ಬಿದ್ದರೆ ಹೊಸ ಮನೆ ನಿರ್ಮಾಣ ಅಷ್ಟೇ ಅಲ್ಲದೇ ದೀಪಾವಳಿ ಸಂದರ್ಭದಲ್ಲಿ ಬಡವರ ಜೊತೆ ದೀಪಾವಳಿ ಆಚರಿಸುವ ಮುಖಾಂತರ ತಾನು ಉದ್ಯಮದಲ್ಲಿ ಗಳಿಸಿದ ಸಂಪತ್ತಿನ ಒಂದು ಭಾಗವನ್ನು ಬಡವರಿಗೆ ದಾನ ಮಾಡುವ ಮುಖಾಂತರ ಹಲವು ಶ್ರೀಮಂತ ಉದ್ಯಮಿಗಳಿಗೆ ಮಾದರಿ ಎನಿಸಿದ್ದಾರೆ.
ಅದೇ ರೀತಿ ಕಳೆದ ಕೊರೊನಾ ಸಂದರ್ಭದಲ್ಲಿಯೂ ಬಡ ಜನತೆಗೆ, ಆಟೋ ಚಾಲಕರಿಗೆ ಕಿಟ್ ಗಳನ್ನು ನೀಡುವ ಮೂಲಕ ಸ್ಪಂದಿಸಿದ್ದಾರೆ. ಅಷ್ಟೇ ಅಲ್ಲದೇ ಕಾಲೇಜು ವಿದ್ಯಾರ್ಥಿಗಳಿಗೆ ರೈ ಎಸ್ಟೇಟ್ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಬಸ್ ಪಾಸ್ ವಿತರಣೆ., ಬಡ ವರ್ಗದ ಮಕ್ಕಳಿಗೆ ಶಾಲೆಗೆ ತೆರಳಲು ಬೇಕಾದ ಸಮವಸ್ತ್ರ, ಪುಸ್ತಕಗಳು, ಬ್ಯಾಗ್, ಶಾಲಾ ಶುಲ್ಕ ವಿತರಣೆ., ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಣೆ., ದೇವಸ್ಥಾನ, ದೈವಸ್ಥಾನಗಳ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವಕ್ಕೆ ದೇಣಿಗೆ ನೀಡಿಕೆ ಹೀಗೆ ಹಲವಾರು ವಿಧವಾಗಿ ಸುಮಾರು 7,500 ಕುಟುಂಬಗಳಿಗೂ ಅಧಿಕ ಬಡ ಕುಟುಂಬಗಳ ಸಂಕಷ್ಟಕ್ಕೆ ಸ್ಪಂದಿಸಿದ, ಇಂದಿಗೂ ಬಡ ವರ್ಗದ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ.





