ಲಾಡ್ಜ್ನಲ್ಲಿ ಯುವಕರಿಬ್ಬರ ಮೃತದೇಹ ಪತ್ತೆ: ಸ್ಥಳಕ್ಕೆ ಎಸ್ಪಿ ಭೇಟಿ, ಪರಿಶೀಲನೆ
ವಿಜಯಪುರ: ಯುವಕನೊಬ್ಬ ತನ್ನ ಜೊತೆಗಾರನನ್ನು ಚಾಕುವಿಂದ ಹತ್ಯೆ ಮಾಡಿ ನಂತರ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ನಗರದ ರಾಜಧಾನಿ ಲಾಡ್ಜ್ನಲ್ಲಿ ನಡೆದಿದೆ.
ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಕೃಷ್ಣಪುರ ತಂಡಾ ನಿವಾಸಿ ಸಿ.ಇಂದ್ರಕುಮಾರ ಕೊಲೆಯಾಗಿದ್ದು, ಇತನನ್ನು ಕೊಲೆ ಮಾಡಿದ ಇನೊಬ್ಬ ವ್ಯಕ್ತಿಯ ಹೆಸರು ತಿಳಿದು ಬಂದಿಲ್ಲ.
ಇಂದ್ರಕುಮಾರ ಮಾ.22 ರಂದು ಆಧಾರ್ ಕಾರ್ಡ್ ತೋರಿಸಿ ಲಾಡ್ಜ್ನಲ್ಲಿ ರೂಮ್ ನಂ 114ನ್ನು ಪಡೆದುಕೊಂಡಿದ್ದ. ಇನ್ನೊಬ್ಬ ವ್ಯಕ್ತಿ ಯಾವಾಗ ರೂಮ್ಗೆ ಬಂದಿದ್ದಾನೆ ಎನ್ನುವುದು ಲಾಡ್ಜ್ ಸಿಬ್ಬಂದಿಗೆ ಮಾಹಿತಿ ಇಲ್ಲ.
ಎರಡು ದಿನ ರೂಮ್ ಬಾಗಿಲು ಸಹ ತೆರೆದಿರಲಿಲ್ಲ. ಶುಕ್ರವಾರ ಕೊಠಡಿಯಿಂದ ಕೆಟ್ಟ ವಾಸನೆ ಬರಲು ಆರಂಭಿಸಿದೆ. ಬೆಳಗ್ಗೆ 10ಗಂಟೆ ಸುಮಾರಿಗೆ ಲಾಡ್ಜ್ ಸಿಬ್ಬಂದಿ ಇನ್ನೊಂದು ಕೀ ಬಳಸಿ ರೂಮ್ ಬಾಗಿಲು ತೆಗೆದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ.




