ಸುಳ್ಯ: ಬಸ್ಸಿನಡಿಗೆ ಬಿದ್ದು ವಿದ್ಯಾರ್ಥಿನಿ ಮೃತಪಟ್ಟ ಪ್ರಕರಣ:
ಬಸ್ ಚಾಲಕನಿಗೆ ಶಿಕ್ಷೆ ಪ್ರಕಟ
ಸುಳ್ಯ: ಐದು ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ಶಾಲಾ ಬಸ್ಸಿನಡಿಗೆ ಬಿದ್ದು ವಿದ್ಯಾರ್ಥಿನಿ ಮೃತಪಟ್ಟ ಪ್ರಕರಣದಲ್ಲಿ ಬಸ್ ಚಾಲಕನಿಗೆ ನ್ಯಾಯಲಯವು ಜೈಲು ಶಿಕ್ಷೆ ವಿಧಿಸಿದ ಘಟನೆ ನಡೆದಿದೆ.
2018 ಫೆಬ್ರವರಿ 12ರಂದು ಅರಂತೋಡು ಗ್ರಾಮದ ಬಿಳಿಯಾರು ಎಂಬಲ್ಲಿ ಸುಳ್ಯದ ಕೆವಿಜಿ ಐಪಿಎಸ್ ಶಾಲೆಯ ಒಂದನೆಯ ತರಗತಿ ವಿದ್ಯಾರ್ಥಿನಿ ಆಗ್ನೇಯ ಬಾಲು ಬಸ್ಸಿನ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದರು. ನಾಲ್ಕು ವರ್ಷಗಳ ಬಳಿಕ ಘಟನೆಗೆ ಸಂಬಂಧಿಸಿ ಶಾಲಾ ಬಸ್ಸು ಚಾಲಕ ಧನಂಜಯ ಎಂಬುವರಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಈ ಘಟನೆಗೆ ಸಂಬಂಧಿಸಿದಂತೆ ಅಂದಿನ ತನಿಖಾಧಿಕಾರಿ ಸರ್ಕಲ್ ಇನ್ ಸ್ಪೆಕ್ಟರ್ ಸತೀಶ್ ಕುಮಾರ್ ಆರ್ ಪ್ರಕರಣ ದಾಖಲಿಸಿಕೊಂಡು ಬಸ್ಸು ಚಾಲಕ ಧನಂಜಯರ ಮೇಲೆ ಕಲಂ 279, 304(ಎ ) ಮತ್ತು ಬಸ್ ನ ಉಸ್ತುವಾರಿ ದಿನೇಶ್ ಮೇಲೆ ಕಲಂ 304(ಎ ) ಪ್ರಕಾರ ಶಿಕ್ಷಾರ್ಹ ಅಪರಾಧ ಎಸೆಗಿರುತ್ತಾರೆ ಎಂದು ದೋಷರೋಪಣ ಪತ್ರವನ್ನು ಕೋರ್ಟಿಗೆ ಸಲ್ಲಿಸಿದ್ದರು.
ತನಿಖೆ ನಡೆಸಿರುವ ನ್ಯಾಯಾಲಯ ಮಾರ್ಚ್ 23ರಂದು ತೀರ್ಪು ನೀಡಿದ್ದು, ಒಂದನೇ ಆರೋಪಿ ಬಸ್ಸು ಚಾಲಕ ಧನಂಜಯರಿಗೆ 304(ಎ ) ಕಲಂ ಅಡಿಯಲ್ಲಿ ಒಂದು ವರ್ಷ ಜೈಲು ಶಿಕ್ಷೆ 5,000 ರೂ ದಂಡ, ದಂಡ ಕಟ್ಟಲು ತಪ್ಪಿದರೆ 2 ತಿಂಗಳು ಸಜೆ ಮತ್ತು ಕಲಂ 279 ಗೆ ಆರು ತಿಂಗಳು ಸಾದಾ ಸಜೆ ಮತ್ತು ರೂ.1000 ರೂ ದಂಡ, ದಂಡ ಕಟ್ಟಲು ತಪ್ಪಿದರೆ ಒಂದು ತಿಂಗಳು ಸಜೆ ವಿಧಿಸಿದೆ. ಪ್ರಕರಣದ ಎರಡನೇ ಆರೋಪಿ ದಿನೇಶ್ ರನ್ನು ದೋಷಮುಕ್ತ ಆದೇಶ ನೀಡಿದೆ.
ಪ್ರಕರಣದಲ್ಲಿ ಸುಳ್ಯ ನ್ಯಾಯಾಲಯದ ಎಪಿಪಿ ಜನಾರ್ದನ್ ಮತ್ತು ಆರೋನ್ ಡಿಸೋಜರವರು ಸಾಕ್ಷಿ ವಿಚಾರಣೆ ನಡೆಸಿದ್ದು, ಪುತ್ತೂರು ಏ ಪಿ ಪಿ ಕವಿತಾ ರವರು ಸರ್ಕಾರದ ಪರವಾಗಿ ವಾದ ಮಂಡಿಸಿರುತ್ತಾರೆ.




