ಮಂಗಳೂರು: ಅಕ್ರಮ ಮದ್ಯ ತಯಾರಿಕೆ, ಮಾರಾಟ: ಅಬಕಾರಿ ಇಲಾಖೆಯಿಂದ ದಾಳಿ, ಜಪ್ತಿ
ಮಂಗಳೂರು: ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ಹಾಗೂ ಮಂಗಳೂರು ನಗರ ವಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ, ತಯಾರಿಕೆ ಹಾಗೂ ದಾಸ್ತಾನು ಚಟುವಟಿಕೆ ನಡೆಸುವ ಕೇಂದ್ರಗಳಿಗೆ ಮಾರ್ಚ್ 6ರಿಂದ 20ರವರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಮದ್ಯ ಸಹಿತ ಹಲವು ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಬಂಟ್ವಾಳ ತಾಲೂಕಿನಲ್ಲಿ ಮಾರ್ಚ್ 16ರಂದು ದಾಳಿ ನಡೆಸಿ ಒಟ್ಟು 23,400 ಲೀಟರ್ ಬಿಯರ್, 1 ಆಟೋ ರಿಕ್ಷಾ ಮತ್ತು ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಮಾರ್ಚ್ 17ರಂದು ಬೆಳ್ತಂಗಡಿ ತಾಲೂಕಿನಲ್ಲಿ 4.140 ಲೀಟರ್ ಮದ್ಯ ಹಾಗೂ ಒಂದು ವಾಹನವನ್ನು ಜಪ್ತಿ ಮಾಡಲಾಗಿದೆ. ಮಾರ್ಚ್ 18ರಂದು 20 ಲೀಟರ್ ಶೇಂದಿಯನ್ನು ವಶಪಡಿಸಲಾಗಿದೆ. ಸುಳ್ಯ ತಾಲೂಕಿನಲ್ಲಿ 9.450 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಮೂಡಬಿದ್ರೆ ತಾಲೂಕಿನಲ್ಲಿ ಮಾರ್ಚ್ 19ರಂದು 8.640 ಲೀಟರ್ ಮದ್ಯ ವಶಪಡಿಸಲಾಗಿದೆ. ಮಾರ್ಚ್ 20ರಂದು ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದಲ್ಲಿ ದಾಳಿ ನಡೆಸಿ 16 ಲೀಟರ್ ಕಳ್ಳಭಟ್ಟಿ, ಹಾಗೂ ಒಂದು ಆರೋಪಿಯನ್ನು ಬಂಧಿಸಲಾಗಿದೆ. ಪುತ್ತೂರು ತಾಲೂಕಿನಲ್ಲಿ ಒಟ್ಟು 14.170 ಲೀಟರ್ ಮದ್ಯ ಹಾಗೂ 2 ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಜಿಲ್ಲೆಯಲ್ಲಿ 2023ರ ಮಾರ್ಚ್ 6ರಿಂದ 20ರವರೆಗೆ 210 ಅಬಕಾರಿ ದಾಳಿ ನಡೆಸಿ ಕರ್ನಾಟಕ ಅಬಕಾರಿ ಕಾಯಿದೆಯಡಿ ಒಟ್ಟು 8 ಘೋರ ಪ್ರಕರಣಗಳು ಹಾಗೂ 42 15(ಎ) ಪ್ರಕರಣಗಳನ್ನು ದಾಖಲಿಸಿದೆ. ಇಬ್ಬರು ಆರೋಪಿಗಳನ್ನು ಬಂಧಿಸಿ, 4 ವಾಹನಗಳನ್ನು ವಶಪಡಿಸಿಕೊಂಡು, 62.670 ಲೀಟರ್ ಮದ್ಯ 31.700 ಲೀ. ಬಿಯರ್, 20 ಲೀಟರ್ ಶೇಂದಿ, 16 ಲೀಟರ್ ಕಳ್ಳಭಟ್ಟಿ ಸಾರಾಯಿ ವಶಪಡಿಸಿಕೊಳ್ಳಲಾಗಿದ್ದು, ಒಟ್ಟು 1,94,993 ರೂ. ಅಂದಾಜು ಮೊತ್ತದ ಸೊತ್ತುಗಳನ್ನು ಜಪ್ತಿಮಾಡಲಾಗಿದೆ ಎಂದು ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.




