February 3, 2026

ಪಿಎಸ್ಐ ಮೇಲೆ ಹಲ್ಲೆ ಪ್ರಕರಣ: ಶಾಸಕ ಪುತ್ರನ ವಿರುದ್ಧ ಮೊಕದ್ದಮೆ ದಾಖಲು

0
n480371420167885348572347737287fbd2f658a45827af3352e353c2f1fc62d39b33b26665249fc02e0fe4.jpg

ಸಿಂಧನೂರು: ಇಲ್ಲಿನ ಸಣ್ಣಜಿನ್ ಕಾಂಪ್ಲೆಕ್ಸ್ ಎದುರು ನೂತನವಾಗಿ ನಿರ್ಮಿಸಲಾದ ರಂಗಮಂದಿರದ ಎದುರು ಪುನೀತ್ ರಾಜಕುಮಾರ್ ಪುತ್ಥಳಿ ಸ್ಥಾಪನೆಗೆ ಸಂಬಂಧಿಸಿದಂತೆ ಪೊಲೀಸರು ಮತ್ತು ಪುನೀತ್‌ ರಾಜ್‌ಕುಮಾರ್ ಅಭಿಮಾನಿಗಳ ನಡುವೆ ಮಂಗಳವಾರ ವಾಗ್ದಾಳಿ, ತಳ್ಳಾಟ ನಡೆಯಿತು.

ಶಾಸಕ ವೆಂಕಟರಾವ್ ನಾಡಗೌಡರ ಪುತ್ರ ಅಭಿಷೇಕ ನಾಡಗೌಡ ನೇತೃತ್ವದಲ್ಲಿ ಪುನೀತ್‌ ರಾಜ್‌ಕುಮಾರ್ ಅಭಿಮಾನಿಗಳು ಪುನೀತ್‌ ಅವರ ಪುತ್ಥಳಿ ಸಮೇತ ಕೈಗೊಂಡಿದ್ದ ಮೆರವಣಿಗೆಯನ್ನು ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಸೇರಿ ಇತರ ಅಧಿಕಾರಿಗಳು ಮತ್ತು ಪೊಲೀಸರು ತಡೆದರು.

‘ಮಾರ್ಚ್ 20 ಅಥವಾ 21ರಂದು ಸರ್ವ ಪಕ್ಷಗಳ, ಎಲ್ಲ ಕಲಾವಿದರ, ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಸಭೆ ಕರೆದು, ಚರ್ಚಿಸಿ ಪುತ್ಥಳಿ ಸ್ಥಾಪನೆ ಕುರಿತು ನಿರ್ಧರಿಸಲಾಗುವುದು’ ಎಂದು ಅಧಿಕಾರಿಗಳು ತಿಳಿ ಹೇಳಿದರು.

ಆದರೆ, ಇದಕ್ಕೆ ಒಪ್ಪದ ಅಭಿಮಾನಿಗಳು, ‘ನೀವು ಪ್ರಕರಣ ದಾಖಲಿಸಿದರೂ ಅಥವಾ ಜೈಲಿಗೆ ಕರೆದೊಯ್ದರೂ ನಾವು ಪುತ್ಥಳಿ ಸ್ಥಾಪಿಸುತ್ತೇವೆ’ ಎಂದು ಹೇಳಿ ಮತ್ತೆ ಮೆರವಣಿಗೆ ಮುಂದುವರೆಸಿದಾಗ, ನೂಕು ನುಗ್ಗಾಟ ನಡೆದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಆಗ, ಕೆಲವರು ಪಿಎಸ್‌ಐ ಮಣಿಕಂಠ ಅವರ ಮೇಲೆ ಹಲ್ಲೆಗೆ ಮುಂದಾದ ಘಟನೆಯೂ ನಡೆಯಿತು. ದಿಢೀರ್‌ ಪ್ರತಿಭಟನೆ ಕೈಗೊಂಡ ಅಭಿಷೇಕ ನಾಡಗೌಡ ಹಾಗೂ ಅಪ್ಪು ಅಭಿಮಾನಿಗಳು, ‘ಪಿಎಸ್‌ಐ ಮಣಿಕಂಠ ಅವರನ್ನು ಅಮಾನತು ಮಾಡಬೇಕು’ ಎಂದು ಒತ್ತಾಯಿಸಿದರು.

ಮಣಿಕಂಠ ಮೇಲೆ ಹಲ್ಲೆ ನಡೆದಿದ್ದನ್ನು ವಿರೋಧಿಸಿ ಕುರುಬ ಸಮಾಜದವರು, ‘ಪಿಎಸ್‌ಐ ಮಣಿಕಂಠ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಪುನೀತ್ ಅಭಿಮಾನಿಗಳ ಪರವಾಗಿ ಠಾಣೆಯ ಮುಂಭಾಗದಲ್ಲಿ ಜೆಡಿಎಸ್ ಮುಖಂಡರೂ ಧರಣಿ ನಡೆಸಿದರು. ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಪಿಎಸ್‌ಐ ಮಣಿಕಂಠ ದೂರು ಆಧರಿಸಿ ಶಹರ ಪೊಲೀಸ್ ಠಾಣೆಯಲ್ಲಿ ಶಾಸಕರ ಪುತ್ರ ಅಭಿಷೇಕ ನಾಡಗೌಡ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಅಜಯ್ ದಾಸರಿ ಸೇರಿ 24 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!