ಜಾಮೀನು ಸಿಕ್ಕ ಬೆನ್ನಲ್ಲೇ ನಾಪತ್ತೆಯಾಗಿದ್ದ ಮಾಡಾಳ್ ವಿರೂಪಾಕ್ಷಪ್ಪ ಮನೆಗೆ ವಾಪಸ್: ವಾಹನದಲ್ಲಿ ಮೆರವಣಿಗೆ
ದಾವಣಗೆರೆ: ನಾಪತ್ತೆಯಾಗಿದ್ದ ಮಾಡಾಳ್ ವಿರೂಪಾಕ್ಷಪ್ಪ 6 ದಿನಗಳ ಬಳಿಕ ಚನ್ನಗಿರಿಯ ನಿವಾಸಕ್ಕೆ ವಾಪಸ್ ಆಗಿದ್ದಾರೆ.
ಕೆಎಸ್ಡಿಎಲ್ ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಎ1 ಆರೋಪಿಯಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಇಂದು ರಿಲೀಫ್ ಸಿಕ್ಕಿತ್ತು.
ಜಾಮೀನು ಸಿಗುತ್ತಿದ್ದಂತೆ ಮಾಡಾಳ್ ವಿರೂಪಾಕ್ಷಪ್ಪ ಕಾಣಿಸಿಕೊಂಡಿದ್ದಾರೆ. ದಾವಣಗೆರೆ ತಮ್ಮ ಮನೆಯ ಬಳಿ ಕಾಣಿಸಿಕೊಂಡಿದ್ದಾರೆ. ಅವರ ಸ್ವಗ್ರಾಮ ಚನ್ನೇಶಪುರದಲ್ಲಿ ಶಾಸಕರು ಬರುತ್ತಿದ್ದಂತೆ, ನೂರಾರು ಬೆಂಬಲಿಗರು ಅಲ್ಲಿ ಸೇರಿದ್ದರು. ಶಾಸಕರನ್ನು ತೆರೆದ ಕಾರಿನಲ್ಲಿ ಮೆರವಣಿಗೆ ಮಾಡಿ ಜೈಕಾರ ಕೂಗಿದರು.
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ವಿರೂಪಾಕ್ಷಪ್ಪಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಸಿಕ್ಕಿದ ಬೆನ್ನಲ್ಲೇ ವಿರೂಪಾಕ್ಷಪ್ಪ ಮನೆಗೆ ವಾಪಸ್ ಆಗಿದ್ದಾರೆ. ಸ್ವಗ್ರಾಮ ಚನ್ನೇಶಪುರದಲ್ಲಿ ಮಾತನಾಡಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಲೋಕಾಯುಕ್ತ ದಾಳಿ ವೇಳೆ ಸಿಕ್ಕಿರುವ ಹಣ ನಾವು ಸಂಪಾದನೆ ಮಾಡಿದ ಹಣ. ಅದಕ್ಕೆ ನಾವು ದಾಖಲೆಗಳನ್ನು ಒದಗಿಸುತ್ತೇವೆ ಎಂದು ಹೇಳಿದ್ದಾರೆ. ಕೆಎಸ್ಡಿಎಲ್ ಅಧ್ಯಕ್ಷನಾಗಿ ನಾನು ಯಾವುದೇ ಅಕ್ರಮವೆಸಗಿಲ್ಲ. ಈ ಪ್ರಕರಣದಲ್ಲಿ ನಿಸ್ಪಕ್ಷಪಾತವಾಗಿ ತನಿಖೆ ನಡೆಸುತ್ತೇವೆ ಎಂದು ಸಿಎಂ ಹೇಳಿದ್ದಾರೆ ಎಂದೂ ವಿರೂಪಾಕ್ಷಪ್ಪ ಹೇಳಿದ್ದಾರೆ.




