ಅದಾನಿ ಗ್ರೂಪ್ ವಿರುದ್ಧದ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ
ನವ ದೆಹಲಿ: ಅದಾನಿ-ಹಿಂಡೆನ್ಬರ್ಗ್ ವಿವಾದಕ್ಕೆ ಸಂಬಂಧಿಸಿ ತನಿಖೆ ನಡೆಸಲು ಸುಪ್ರೀಂಕೋರ್ಟ್ ಗುರುವಾರ ಆದೇಶಿಸಿದೆ.
ನಿವೃತ್ತ ನ್ಯಾಯಾಧೀಶ ಎ.ಎಂ ಸಪ್ರೆ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ನೇಮಿಸಲಾಗಿದೆ. ಜತೆಗೆ ಈಗಿನ ವಿದ್ಯಮಾನಗಳ ಸ್ಥಿತಿಗತಿ ಬಗ್ಗೆ ಇನ್ನೆರಡು ತಿಂಗಳೊಳಗೆ ವರದಿ ನೀಡುವಂತೆ ಸೆಬಿಗೆ ತಿಳಿಸಿದೆ.
ಸೆಬಿ ನಿಯಮದ ಸೆಕ್ಷನ್ 19 ಅನ್ನು ಅದಾನಿ ಗ್ರೂಪ್ ಉಲ್ಲಂಘನೆ ಮಾಡಿದೆಯೇ?, ಸ್ಟಾಕ್ ಮಾರುಕಟ್ಟೆಯಲ್ಲಿ ಯಾವುದೇ ಮ್ಯಾನಿಪುಲೇಷನ್ನಲ್ಲಿ ಅದಾನಿ ಗ್ರೂಪ್ ತೊಡಗಿದೆಯೇ ಎಂಬ ಬಗ್ಗೆ ತನಿಖೆಗೆ ದೇಶದ ಉನ್ನತ ನ್ಯಾಯಾಲಯವು ಆದೇಶಿಸಿದೆ. ಹಿಂಡನ್ಬರ್ಗ್ ವರದಿಯ ಬಳಿಕ ನಿವೃತ್ತ ನ್ಯಾಯಮೂರ್ತಿ ಎ ಎಂ ಸಾಪ್ರೆ ನೇತೃತ್ವದ ತಜ್ಞರ ಸಮಿತಿಯನ್ನು ಸುಪ್ರೀಂ ಕೋರ್ಟ್ ರಚನೆ ಮಾಡಿದೆ. ಹಾಗೆಯೇ ಅದಾನಿ ಗ್ರೂಪ್ ವಿರುದ್ಧ ಸೆಬಿ ತನಿಖೆಗೆ ಆದೇಶಿಸಿದೆ.
ಹೂಡಿಕೆದಾರರ ಸುರಕ್ಷತೆ, ಇತರೆ ವಿಚಾರಗಳ ಬಗ್ಗೆ ಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿದೆ ಎಂದು ವರದಿ ಉಲ್ಲೇಖಿಸಿದೆ. ಇನ್ನು ಈಗಾಗಲೇ ವಿರೋಧ ಪಕ್ಷಗಳು ಅದಾನಿ ಗ್ರೂಪ್ ವಿರುದ್ಧದ ತನಿಖೆಗೆ ಭಾರೀ ಆಗ್ರಹ ಮಾಡಿದೆ. ಹಾಗೆಯೇ ಹಿಂಡನ್ಬರ್ಗ್ ವರದಿ ಬಳಿಕ ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ಭಾರೀ ನಷ್ಟ ಕಂಡಿದೆ. ಆದರೆ ಕಳೆದ ಒಂದು ದಿನದಲ್ಲಿ ಅದಾನಿ ಗ್ರೂಪ್ ಸ್ಟಾಕ್ಗಳು ಕೊಂಚ ಚೇತರಿಕೆ ಕಾಣುತ್ತಿದೆ. ಗೌತಮ್ ಅದಾನಿ ನಿವ್ವಳ ಆದಾಯದಲ್ಲೂ ಏರಿಕೆ ಕಂಡಿದೆ.
ತಜ್ಞರ ಸಮಿತಿಯಲ್ಲಿ ಒಪಿ ಭಟ್, ಜೆಪಿ ದೇವಧರ್, ಕೆವಿ ಕಾಮತ್, ನಂದನ್ ನಿಲೇಕಣಿ, ಸೋಮಶೇಖರ್ ಸುಂದರೇಶನ್ ಇದ್ದಾರೆ. ಅದಾನಿ-ಹಿಂಡೆನ್ ಬರ್ಗ್ ವಿವಾದಕ್ಕೆ ಕಾರಣ, ಹೂಡಿಕೆದಾರರ ಹಿತ ರಕ್ಷಣೆ, ಮಾರುಕಟ್ಟೆ ವೈಫಲ್ಯದ ಬಗ್ಗೆ ತನಿಖೆ ನಡೆಸಲಿದೆ.




