ಸುಬ್ರಹ್ಮಣ್ಯ: ಅರಣ್ಯ ಪ್ರದೇಶದಲ್ಲಿ ಕಾಡಾನೆ ಪ್ರತ್ಯಕ್ಷ: ಪತ್ತೆ ಕಾರ್ಯ ಚುರುಕು

ಸುಬ್ರಹ್ಮಣ್ಯ: ಕಡಬ ತಾಲೂಕಿನ ಕಲ್ಲುಗುಡ್ಡೆ-ಉದನೆ ಸಂಪರ್ಕ ರಸ್ತೆಯ ನಿಡ್ಡೋ ಬಳಿಯ ಅರಣ್ಯದಲ್ಲಿ ಕಾಡಾನೆಯೊಂದು ವ್ಯಕ್ತಿಯೋರ್ವರಿಗೆ ಕಾಣಿಸಿದೆ.
ಅವರು ನೀಡಿದ ಮಾಹಿತಿಯನುಸಾರ ಅರಣ್ಯ ಇಲಾಖೆಯ ತಂಡವು ಕಾಡಾನೆ ಪತ್ತೆ ಕಾರ್ಯವನ್ನು ಮತ್ತೆ ಚುರುಗೊಳಿಸಿದೆ. ಅಡೆಂಜ, ಬಳಕ್ಕ, ಇಚಿಲಡ್ಕ, ನಿಡ್ಡೋ ಅರಣ್ಯ ಪ್ರದೇಶದಲ್ಲಿ ತೀವ್ರ ಹುಡುಕಾಟ ನಡೆಸಲಾಯಿತು.
ಕಡಬ ತಾಲೂಕಿನ ರೆಂಜಿಲಾಡಿಯ ಮೀನಾಡಿಯಲ್ಲಿ ಸೋಮವಾರ ಕಾಡಾನೆ ದಾಳಿಗೆ ಇಬ್ಬರು ಬಲಿಯಾಗಿದ್ದರು. ಇದರ ಬೆನ್ನಲ್ಲೇ ಸ್ಥಳೀಯರ ಆಗ್ರಹದಂತೆ 5 ಸಾಕಾನೆ ಗಳ ನೆರವಿನಿಂದ ಕಾಡಾನೆ ಸೆರೆಗೆ ಕಾರ್ಯಾಚರಣೆ ನಡೆಸಲಾಗಿದ್ದು, ಮೂರನೇ ದಿನದ ಕಾರ್ಯಾಚರಣೆಯಲ್ಲಿ ನರಹಂತಕ ಕಾಡಾನೆಯನ್ನು ಕೊಂಬಾರು ಬಳಿ ಸೆರೆಹಿಡಿದು ನಾಗರಹೊಳೆ ಸಾಕಾನೆ ಶಿಬಿರಕ್ಕೆ ಸಾಗಿಸಲಾಗಿದೆ. ಬಾಕಿ ಇರುವ ಕಾಡಾನೆಗಳ ಸೆರೆಗೆ ಕಾರ್ಯಾಚರಣೆ ಮುಂದುವರಿದಿದೆ.