ಮಂಗಳೂರು: ಮಗು ಅದಲು-ಬದಲು ಪ್ರಕರಣ:
ಸಂತ್ರಸ್ತ ಮಗು ಮೃತ್ಯು
ಮಂಗಳೂರು: ಮಂಗಳೂರಿನ ಆಸ್ಪತ್ರೆಯಲ್ಲಿ ಮಗು ಅದಲು-ಬದಲು ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತ ಮಗು ಸೋಮವಾರ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಮಂಗಳೂರಿನ ಲೇಡಿಗೋಸನ್ ಆಸ್ಪತ್ರೆಯಲ್ಲಿ ನಡೆದ ಮಗು ಅದಲು ಬದಲು ಪ್ರಕರಣ ಭಾರೀ ವಿವಾದ ಉಂಟು ಮಾಡಿದ್ದು, ಅದಲು ಬದಲು ಪ್ರಕರಣದಲ್ಲಿ ಪೋಷಕರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಬಳಿಕ ಮಗುವಿನ ಡಿ ಎನ್ ಎ ಪರೀಕ್ಷೆಗಾಗಿ ಮಾದರಿಯನ್ನು ಹೈದರಾಬಾದಿಗೆ ಕಳುಹಿಸಿಕೊಡಲಾಗಿತ್ತು. ಪರೀಕ್ಷಾ ವರದಿ ಬರುವುದಕ್ಕಿಂತ ಮೊದಲೇ ಮಗು ಮೃತಪಟ್ಟಿದೆ. ಮೂಲಗಳ ಪ್ರಕಾರ, ಉಸಿರಾಟದ ತೊಂದರೆಯಿಂದ ಮಗು ಮೃತಪಟ್ಟಿದೆ ಎನ್ನಲಾಗಿದೆ.
ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯಲ್ಲಿ ಅಕ್ಟೋಬರ್ 15ರಂದು, ಕುಂದಾಪುರ ಮೂಲದ ಪೋಷಕರು, ನಮಗೆ ಆಸ್ಪತ್ರೆಯ ಸಿಬ್ಬಂದಿ ಮೊದಲು, ಮಗು ಹೆಣ್ಣು ಎಂದು ಹೇಳಿದ್ದರು. ದಾಖಲೆಗಳಲ್ಲಿ ಕೂಡಾ ಅದನ್ನೇ ಉಲ್ಲೇಖಿಸಿ, ಕೊನೆಗೆ ಯಾರದೋ ಗಂಡು ಮಗುವನ್ನು ಕೊಟ್ಟಿದ್ದಾರೆ ಎಂದು ದೂರು ದಾಖಲಿಸಿದ್ದರು. ಕೊನೆಗೆ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಆ ಬಳಿಕ ಕೋರ್ಟ್ ಆದೇಶದಂತೆ DNA ಪರೀಕ್ಷೆಗಾಗಿ ಮಗುವಿನ ಮತ್ತು ಪೋಷಕರ ಮಾದರಿಗಳನ್ನು ಕಳುಹಿಸಿಕೊಡಲಾಗಿತ್ತು. ಇದೀಗ ಅದರ ವರದಿ ಬರುವ ಮೊದಲೇ ಮಗು ಮಾತ್ರ ಮೃತಪಟ್ಟಿದೆ.





