ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ಗೆ ಕ್ರೂಸರ್ ಢಿಕ್ಕಿ – ದಂಪತಿ ಮೃತ್ಯು, ಒಂಬತ್ತು ಮಂದಿಗೆ ಗಾಯ
ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ಗೆ ಧೂಳಖೇಡ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಂಬದಿಯಿಂದ ಕ್ರೂಸರ್ ಢಿಕ್ಕಿ ಹೊಡೆದ ಪರಿಣಾಮ ದಂಪತಿ ಸ್ಥಳದಲ್ಲೇ ಮೃತಪಟ್ಟು, ಒಂಬತ್ತು ಜನರು ಗಾಯಗೊಂಡ ದುರ್ಘಟನೆ ಸಂಭವಿಸಿದೆ.
ವಿಜಯಪುರ ಜಿಲ್ಲೆಯ ಧೂಳಖೇಡ ಬಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಸಂಭವಿಸಿದ ಭೀಕರ ಅಪಾಯದಲ್ಲಿ ಮೃತಪಟ್ಟವರನ್ನು ಕ್ರೂಸರ್ ನಲ್ಲಿದ್ದ ಬೆಳಗಾವಿ ಜಿಲ್ಲೆ ಅಥಣಿ ಮೂಲದ ಪತಿ-ಪತ್ನಿ ಭಯ್ಯಾಜಿ ಶಿಂಧೆ (50) ಸುಮಿತ್ರಾ ಶಿಂಧೆ (45) ಎಂದು ಗುರುತಿಸಲಾಗಿದೆ.
ಕ್ರೂಸರ್ ನಲ್ಲಿ ಪ್ರಯಾಣಿಸುತ್ತಿದ್ದವರು ಅಥಣಿ ಮೂಲದವರಾಗಿದ್ದು ಮಹಾರಾಷ್ಟ್ರದ ಅಕ್ಕಲಕೋಟ ಬಳಿಯ ಸ್ವಾಮಿ ಸಮರ್ಥ ಕ್ಷೇತ್ರಕ್ಕೆ ತೆರಳುತ್ತಿದ್ದರು.
ದುರಂತದ ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿರುವ ಝಳಕಿ ಪೊಲೀಸರು, ಗಾಯಾಳುಗಳನ್ನು ಸೋಲಾಪುರ ಆಸ್ಪತ್ರೆಗೆ ರವಾನಿಸಿದ್ದು, ಅಲ್ಲದೇ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.





