ಕಾರವಾರ: ಮಾಜಿ ಸಚಿವ ಪ್ರಭಾಕರ ರಾಣೆ ನಿಧನ
ಕಾರವಾರ: ಮಾಜಿ ಸಚಿವ ಪ್ರಭಾಕರ ರಾಣೆ ಸೋಮವಾರ ನಿಧನ ಹೊಂದಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ವಯೋ ಸಹಜ ಅಲ್ಪ ಕಾಲದ ಅಸ್ವಸ್ಥತೆ ಯಿಂದ ಬಳಲುತ್ತಿದ್ದರು. ಮರೆವಿನ(ಅಲ್ಜಮೇರಿಯಾ) ಸಹ ಅವರನ್ನು ಕಾಡುತ್ತಿತ್ತು. ಮಧ್ಯಾಹ್ನ 1.30 ಕ್ಕೆ ಕೊನೆಯುಸಿರೆಳೆದಿದ್ದಾರೆ.
ಸಿದ್ಧರದ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಆರಂಭಿಸಿದ್ದ ಅವರು ಶಿಕ್ಷಕರನ್ನು ಸಂಘಟಿಸಿದ್ದರು. ತಾಲೂಕು ಅಭಿವೃದ್ಧಿ ಮಂಡಳಿ ಸದಸ್ಯರಾಗಿ ರಾಜಕೀಯ ಪ್ರವೇಶಿಸಿದರು. 1983 ರಿಂದ ಮೂರು ಅವಧಿಗೆ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿದ್ದರು.
1993 ರಲ್ಲಿ ವೀರಪ್ಪ ಮೊಯ್ಲಿ ಸಚಿವ ಸಂಪುಟದಲ್ಲಿ ವಯಸ್ಕರ ಶಿಕ್ಷಣ ಮತ್ತು ಸಾಕ್ಷರತೆ ಶಿಕ್ಷಣ ಖಾತೆ ಪಡೆದು 10 ತಿಂಗಳು ಸಚಿವರಾಗಿದ್ದರು. ಬಂಗಾರಪ್ಪ ಅವರ ಕ್ಲಾಸಿಕ್ ಕಂಪ್ಯೂಟರ್ ಹಗರಣವನ್ನು ಸದನದಲ್ಲಿ ಪ್ರಶ್ನಿಸಿ ,ಬಂಗಾರಪ್ಪ ಅಧಿಕಾರ ಕಳೆದುಕೊಳ್ಳಲು ಕಾರಣರಾಗಿದ್ದರು.





