ಮಂಗಳೂರಿನ ಪಬ್ ಮೇಲೆ ಯಾವುದೇ ದಾಳಿ ನಡೆದಿಲ್ಲ: ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್
ಮಂಗಳೂರು: ಮಂಗಳೂರಿನಲ್ಲಿ ಪಬ್ ಮೇಲೆ ಯಾವುದೇ ದಾಳಿ ನಡೆದಿಲ್ಲ. ಆದಾಗ್ಯೂ ಈ ಸಂಬಂಧ ಸಿಸಿಟಿವಿ ದಾಖಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದಾರೆ.
ಘಟನೆ ನಡೆದ ಪಬ್ಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಬಲ್ಮಠದ ರಿ-ಸೈಕಲ್ ರೆಸ್ಟೋರೆಂಟ್ ಕಮ್ ಪಬ್ ಬಹಳಷ್ಟು ವರ್ಷಗಳಿಂದ ಇದೆ. ಸೋಮವಾರ ರಾತ್ರಿ 9 ಗಂಟೆಗೆ ಸಂಘಟನೆಗೆ ಸೇರಿದ ಐದಾರು ಹುಡುಗರು ಬಂದು ಇಲ್ಲಿನ ಬೌನ್ಸರ್ ದಿನೇಶ್ ಅವರೊಂದಿಗೆ ಅಪ್ರಾಪ್ತ ಹುಡುಗ-ಹುಡುಗಿಯರು ಪಬ್ನಲ್ಲಿದ್ದಾರೆಂಬುದಾಗಿ ಹೇಳಿದ್ದಾರೆ. ಕೂಡಲೇ ಮ್ಯಾನೇಜರ್ ಒಳಗೆ ಹೋಗಿ ಪರಿಶೀಲಿಸಿದ್ದು, ಕಾಲೇಜೊಂದರ ವಿದ್ಯಾರ್ಥಿಗಳಿರುವುದನ್ನು ಗಮನಿಸಿ ತತ್ಕ್ಷಣ ಹೊರ ಹೋಗಲು ಹೇಳಿದ್ದಾರೆ. ಬೌನ್ಸರ್ ಹೇಳಿದ ಪ್ರಕಾರ ಸಂಘಟನೆಯ ಕಾರ್ಯಕರ್ತರು ಪಬ್ ಒಳಗೆ ಹೋಗಿಲ್ಲ ಮತ್ತು ಯಾವುದೇ ದಾಳಿಯನ್ನೂ ಮಾಡಿಲ್ಲ. ಹೊರಗಿನಿಂದಲೇ ಮಾತನಾಡಿ ಹಿಂತಿರುಗಿದ್ದಾರೆ ಎಂದು ಸ್ಪಷ್ಟಪಡಿಸಿದರು.




