ಪುತ್ತೂರು: ಸರ ಕಳ್ಳತನ ಪ್ರಕರಣ: ಇಬ್ಬರು ಯುವಕರನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು
ಪುತ್ತೂರು: ಸರ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಯುವಕರನ್ನು ಸ್ಥಳೀಯರು ಬೆನ್ನಟ್ಟಿ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಜು.18 ರಂದು ನಡೆದಿದೆ.
ಕೆಲ ದಿನಗಳ ಹಿಂದೆ ಬೈಕ್ ನಲ್ಲಿ ಬಂದ ಇಬ್ಬರು ಯುವಕರು ಬೆಟ್ಟಂಪಾಡಿಯ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕತ್ತಿನಿಂದ ಚಿನ್ನದ ಕರಿಮಣಿ ಸರವನ್ನು ಎಗರಿಸಿ ಬೈಕಿನಲ್ಲಿ ಪರಾರಿಯಾಗಿದ್ದರು. ಇಂದು ಅದೇ ಯುವಕರು ಬೆಟ್ಟಂಪಾಡಿಗೆ ಬರುವುದನ್ನು ಕಂಡ ಸ್ಥಳೀಯರು ಅವರ ಚಲನವಲನದ ಬಗ್ಗೆ ಹೊಂಚು ಹಾಕಿದ್ದರು.
ಬೆಳಿಗ್ಗೆ ಸಂಟ್ಯಾರ್ ಮೂಲಕ ಬೆಟ್ಟಂಪಾಡಿಗೆ ಎಫ್ ಝೀ ಬೈಕಿನಲ್ಲಿ ಇಬ್ಬರು ತೆರಳುತ್ತಿದ್ದು, ಇದನ್ನು ಗಮನಿಸಿದ ಸ್ಥಳೀಯರು ಕೆಲ ಪ್ರದೇಶಗಳಲ್ಲಿ ಯುವಕರನ್ನು ನಿಲ್ಲಿಸಿದ್ದರು.
ಸರ ಕಳ್ಳರನ್ನು ಅಜ್ಜಿಕಲ್ಲಿನಿಂದ ಪುತ್ತೂರಿಗೆ ಚೇಸ್ ಮಾಡಿಕೊಂಡು ಬಂದ ಸಾರ್ವಜನಿಕರ ಕೈಗೆ ರೆಂಜ ಸಮೀಪ ಆರೋಪಿಗಳು ಸಿಕ್ಕಿ ಬಿದ್ದಿದ್ದು, ಬಳಿಕ ಇಬ್ಬರನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ..
ಇನ್ನೂ ಹಲವು ಕಳವು ಪ್ರಕರಣಗಳಲ್ಲಿ ಇವರು ಭಾಗಿಗಳಾಗಿರುವ ಸಂಶಯ ವ್ಯಕ್ತವಾಗಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.




