ಪುತ್ತೂರಿನ ಒಂಟಿ ವೃದ್ಧೆಯ ಬರ್ಬರವಾಗಿ ಕೊಲೆ ಪ್ರಕರಣ: ದಂಪತಿಗೆ ಜೀವಾವಧಿ ಶಿಕ್ಷೆ, 5 ಲಕ್ಷ ರೂ. ದಂಡ
ಉಡುಪಿ: ತಾಲೂಕಿನ ಪುತ್ತೂರು ಸುಬ್ರಹ್ಮಣ್ಯ ನಗರದಲ್ಲಿ ನಾಲ್ಕು ವರ್ಷದ ಹಿಂದೆ 80 ವರ್ಷದ ಒಂಟಿ ವೃದ್ಧೆಯನ್ನು ಬರ್ಬರವಾಗಿ ಕೊಲೆ ಮಾಡಿದ ದಂಪತಿಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಧಾರವಾಡ ತಾಲೂಕಿನ ನವಲಗುಂದ ನಿವಾಸಿಗಳಾದ ಅಂಬಣ್ಣ ಅಲಿಯಾಸ್ ಅಂಬರೀಶ್ ಹಾಗೂ ಆತನ ಪತ್ನಿ ರಶೀದಾ ಅಲಿಯಾಶ್ ಜ್ಯೋತಿ ಶಿಕ್ಷೆಗೆ ಗುರಿಯಾದ ದಂಪತಿಯಾಗಿದ್ದು, ರತ್ನಾವತಿ ಶೇಡ್ತಿ (80) ಕೊಲೆಯಾದವರು. ದಂಪತಿಗೆ ಜೀವಾವಧಿ ಶಿಕ್ಷೆಯ ಜೊತೆಗೆ ತಲಾ 50,0000 ರೂ.ದಂಡ ಸಹ ವಿಧಿಸಲಾಗಿದೆ.
ಪ್ರಕರಣದ ಹಿನ್ನಲೆ: ರತ್ನಾವತಿ ಶೇಡ್ತಿ ಅವರಿಗೆ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದು, ಪುತ್ತೂರಿನ ಸುಬ್ರಹ್ಮಣ್ಯ ನಗರದಲ್ಲಿ ಒಂಟಿಯಾಗಿ ವಾಸವಾಗಿದ್ದರು. ಮೂರು ಕೊಠಡಿಗಳನ್ನು ಬಾಡಿಗೆ ಕೊಟ್ಟು ಜೀವನ ನಿರ್ವಹಣೆ ಮಾಡುತ್ತಿದ್ದರು. ಮಕ್ಕಳು ಆಗಾಗ ಬಂದು ತಾಯಿಯ ಯೋಗಕ್ಷೇಮ ವಿಚಾರಿಸಿ ಕೊಳ್ಳುತ್ತಿದ್ದರು.
2019ರ ಜು.5ರಂದು ಪುತ್ರಿ ಸುಪ್ರಭಾ ತಾಯಿಗೆ ಕಾಲ್ ಮಾಡಿದಾಗ ಅವರು ಸ್ವೀಕರಿಸಲಿಲ್ಲ. ಕೂಡಲೇ ಸಹೋರರಿಗೆ ಕರೆ ಮಾಡಿ ವಿಚಾರಿಸಿದಾಗಲೂ ತಾಯಿಯ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಅದೇ ದಿನ ಸಂಜೆ ಅಮ್ಮನ ಮನೆಗೆ ಬಂದಾಗ ಬೆಡ್ರೂಮಿನಲ್ಲಿ ತಾಯಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ತತ್ಕ್ಷಣ ಆಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆರೋಪಿಗಳು ಬಿಟ್ಟಿದ್ದ ಸುಳಿವಿನ ಜಾಡು ಹಿಡಿದ ಪೊಲೀಸರು ಜು.10ರಂದು ಆರೋಪಿ ದಂಪತಿಯನ್ನು ಬಂಧಿಸಿದ್ದರು. ಆರೋಪಿಗಳನ್ನು ವಿಚಾರಣೆಗೊಳ ಪಡಿಸಿದಾಗ ಜು.2ರಂದು ಅಪರಾಹ್ನ ರತ್ನಾವತಿ ಶೇಡ್ತಿ ಮನೆಗೆ ನುಗ್ಗಿ ಆಭರಣಕ್ಕೆ ಬೇಡಿಕೆ ಇಡಲಾಗಿತ್ತು.
ಕೊಡಲು ನಿರಾಕರಿಸಿದಾಗ ಕತ್ತಿಯಿಂದ ಕೊಲೆ ಮಾಡಿ ಮೈಮೇಲಿದ್ದ ಆಭರಣ, ಮನೆಯಲ್ಲಿದ್ದ ಚಿನ್ನಾಭರಣ, ಮೊಬೈಲ್ ಹಾಗೂ 5,000ರೂ. ನಗದನ್ನು ದೋಚಿ ಪರಾರಿಯಾಗಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದರು.




