9 ತಿಂಗಳ ಮಗುವನ್ನು ಕೊಲೆಗೈದು ಬಳಿಕ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ತಾಯಿ
ದಾವಣಗೆರೆ: 9 ತಿಂಗಳ ಮಗುವನ್ನು ಕೊಲೆಗೈದು ಬಳಿಕ ತಾಯಿಯೂ ನೇಣಿಗೆ ಶರಣಾದ ಘಟನೆ ದಾವಣಗೆರೆಯ ಜಗಳೂರು ಪಟ್ಟಣದ ಜೆಸಿಆರ್ ಬಡಾವಣೆಯಲ್ಲಿ ನಡೆದಿದೆ.
ಮೃತರನ್ನು ನಿಖಿತಾ (25) ಹಾಗೂ ಅನೀಶ್ (9 ತಿಂಗಳು) ಎಂದು ಗುರುತಿಸಲಾಗಿದೆ.
ನಿಖಿತಾ ತಂದೆ -ತಾಯಿಗಳಿಬ್ಬರು ಶಿಕ್ಷಕರಾಗಿದ್ದು, ತವರು ಮನೆಯಲ್ಲಿದ್ದ ನಿಖಿತಾ ತಂದೆ ತಾಯಿ ಶಾಲೆಗೆ ಹೋದ ಬಳಿಕ ನೇಣಿಗೆ ಶರಣಾಗಿದ್ದಾರೆ.
ಕೌಟುಂಬಿಕ ಕಲಹದಿಂದಾಗಿ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗುತ್ತಿದೆ. ತಾಯಿ ನಿಖಿತಾ ಮೊದಲು 9 ತಿಂಗಳ ಮಗನಿಗೆ ನೇಣು ಬಿಗಿದು ನಂತರ ತಾನು ಕೂಡ ನೇಣಿಗೆ ಶರಣಾಗಿದ್ದಾರೆ.
ಒಂದು ವರ್ಷದ ಹಿಂದೆ ದಾವಣಗೆರೆ ಮೂಲದ ಎಂಜಿನಿಯರ್ ಮನೋಜ್ ಕುಮಾರ್ ಅವರೊಂದಿಗೆ ನಿಖಿತಾ ವಿವಾಹ ನೆರವೇರಿತ್ತು. ನಿನ್ನೆ ತವರಿಗೆ ಬಂದು ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಸ್ಥಳಕ್ಕೆ ಜಗಳೂರು ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.




