ಉಡುಪಿ ಜಿಲ್ಲೆ ಸೇರಿದಂತೆ ಅಂತರ್ ಜಿಲ್ಲೆಗಳ 12 ಬೈಕ್ ಕಳ್ಳತನ ಪ್ರಕರಣ:
ಇಬ್ಬರು ಆರೋಪಿಗಳ ಬಂಧನ
ಉಡುಪಿ: ಉಡುಪಿ ಜಿಲ್ಲೆ ಸೇರಿದಂತೆ ಅಂತರ್ ಜಿಲ್ಲೆಗಳ ಹನ್ನೆರಡು ಬೈಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬೈಕ್ ಕಳ್ಳರಿಬ್ಬರನ್ನು ಉಡುಪಿ ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಒಂಬತ್ತು ಬೈಕ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಉಡುಪಿ ಜಿಲ್ಲೆಯ ವಿವಿಧ ಕಡೆಗಳಲ್ಲಿನ ದ್ವಿಚಕ್ರ ವಾಹನ ಕಳ್ಳತನ ತಡೆಗಟ್ಟುವುದು ಹಾಗೂ ಪತ್ತೆ ಮಾಡುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರ ನಿರ್ದೇಶನದಂತೆ ವಿಶೇಷ ತಂಡವು ಕೋಟ ಸರಹದ್ದಿನ ವಿವಿಧ ಭಾಗದಲ್ಲಿ ವಾಹನ ತಪಾಸಣೆ ಮತ್ತು ದಾಖಲೆ ಪರಿಶೀಲಿಸುತ್ತಿದ್ದ ಸಂದರ್ಭ ಜೂ. 9ರಂದು ವಡ್ಡರ್ಸೆ ಗ್ರಾಮದ ರೈಲ್ವೇ ಬ್ರಿಡ್ಜ್ ಬಳಿ ನಂಬರ್ ಪ್ಲೇಟ್ ಇಲ್ಲದ ವಾಹನವನ್ನು ಸಂಶಯಾಸ್ಪದವಾಗಿ ನಿಲ್ಲಿಸಿದ್ದು, ವಾಹನದ ಬಳಿ ಇದ್ದ ಇಬ್ಬರನ್ನು ದಾಖಲಾತಿಗಳ ಬಗ್ಗೆ ವಿಚಾರಿಸಿದಾಗ ಯಾವುದೇ ದಾಖಲಾತಿಗಳನ್ನು ಹಾಜರುಪಡಿಸದಿರುವುದರಿಂದ ತನಿಖೆ ನಡೆಸಿದ್ದು, ಆಗ ಅದು ಕಳ್ಳತನ ಮಾಡಿದ ಬೈಕ್ ಎನ್ನುವುದು ತಿಳಿದುಬಂದಿದೆ.
ಆಗ ಪ್ರಕರಣದ ಆರೋಪಿಗಳಾದ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು ಅತ್ತಿಗುಡ್ಡೆ ನಿವಾಸಿ ಸೋಮಶೇಖರ (21) ಹಾಗೂ ಬಾಗಲಕೋಟೆ ಜಿಲ್ಲೆ ಹುನಗುಂಡ ತಾಲೂಕು ಹೊಸಮನೆ ನಿವಾಸಿ ಶಂಕರ ಗೌಡ (23) ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.




