ಬಂಟ್ವಾಳ: ಶಂಕಿತ ಡೆಂಗ್ಯೂ ಜ್ವರಕ್ಕೆ ಯುವಕ ಸಾವು
ಬಂಟ್ವಾಳ: ತಾಲೂಕಿನಲ್ಲಿ ಶಂಕಿತ ಡೆಂಗ್ಯೂ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೋರ್ವ ಸಾವನ್ನಪ್ಪಿದ್ದಾರೆ. ವಾಮದಪದವು ನಿವಾಸಿ ಕೃಷಿಕ ಸಂದೀಪ್ ಪೂಜಾರಿ(31) ಮೃತಪಟ್ಟ ಯುವಕ.
ಜ್ವರದಿಂದ ಬಳಲುತ್ತಿದ್ದ ಆತ ಕಳೆದ ಕೆಲವು ದಿನಗಳಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜೂನ್ 9ರಂದು ಮೃತಪಟ್ಟಿದ್ದಾನೆ. ಸಂದೀಪ್ ಅವರ ತಂದೆ ಹಳ್ಳಿ ವೈದ್ಯನಾಗಿ ಸೇವೆ ಸಲ್ಲಿಸಿದರೆ, ತಾಯಿ ಪುಷ್ಪಾವತಿ ವಾಮದಪದವು ಗ್ರಾಮಪಂಚಾಯತ್ ಸದಸ್ಯರಾಗಿದ್ದಾರೆ.
ಸಂದೀಪ್ ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಸಿದ್ದಕಟ್ಟೆ ರೋಟರಿ ಸದಸ್ಯ ಹಾಗೂ ವಾಮದಪದವು ಪ್ರೌಢ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರಾಗಿದ್ದರು. ಇತ್ತೀಚಿಗೆ ಮದುವೆಯಾಗಿದ್ದು ಒಂದು ವರ್ಷದ ಮಗು, ಪತ್ನಿ ಸಹಿತ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.