ವಿಟ್ಲ: ಹಿಂದೂ ಸಮಾವೇಶದಲ್ಲಿ ಇಸ್ಲಾಂ ಧರ್ಮದ ಬಗ್ಗೆ ಅವಹೇಳನ ಹೇಳಿಕೆ:
ರಾಧಾಕೃಷ್ಣ ಅಡ್ಯಂತಾಯ ಮತ್ತು ಸಂಘಟಕರ ವಿರುದ್ಧ ಸೂಕ್ತ ಕ್ರಮಕ್ಕೆ ಮುಸ್ಲಿಂ ಒಕ್ಕೂಟದಿಂದ ದೂರು ದಾಖಲು
ವಿಟ್ಲ: ಹಿಂದೂ ಜಾಗರಣ ವೇದಿಕೆ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಇಸ್ಲಾಂ ಧರ್ಮದ ಬಗ್ಗೆ ನಿಂದಿಸಿದ ವಿಚಾರಕ್ಕೆ ಸಂಬಂಧಿಸಿ, ವಿಟ್ಲ ಮುಸ್ಲಿಂ ಒಕ್ಕೂಟ ಖಂಡನಾ ಸಭೆ ನಡೆಸಿ ಆತನ ವಿರುದ್ಧ ಕಠಿಣ ಕಾನೂನು ಜರುಗಿಸುವಂತೆ ಆಗ್ರಹಿಸಿ ವಿಟ್ಲ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಮುಸ್ಲಿಂ ಒಕ್ಕೂಟದ ಗೌರವಾಧ್ಯಕ್ಷ ಎಂ.ಎಸ್ ಮಹಮ್ಮದ್ ಮತ್ತು ಅಧ್ಯಕ್ಷ ವಿ.ಎಚ್ ಅಶ್ರಪ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಧಾಕೃಷ್ಣ ಅಡ್ಯಂತಾಯ ಅವರ ಹೇಳಿಕೆಯನ್ನು ಖಂಡಿಸಲಾಯಿತು.
ಈ ಸಂದರ್ಭ ಮಾತನಾಡಿದ ಎಂ.ಎಸ್ ಮಹಮ್ಮದ್ ಅವರು ಇಸ್ಲಾಂ ಧರ್ಮವಲ್ಲ ಎಂದು ಹೇಳುವ ಅಡ್ಯಂತಾಯಗೆ ಇಸ್ಲಾಂ ಧರ್ಮದ ಬಗ್ಗೆ ಏನು ಗೊತ್ತು? ಪವಿತ್ರವಾದ ಹಿಂದೂ ಧರ್ಮದ ತತ್ವವನ್ನು ಅಡ್ಯಂತಾಯ ಅರ್ಥ ಮಾಡಿಕೊಂಡಿದ್ದರೆ ಮತ್ತೊಂದು ಧರ್ಮದ ಬಗ್ಗೆ ಕೀಳಾಗಿ ಮಾತನಾಡುತ್ತಿರಲಿಲ್ಲ. ಈ ರೀತಿ ಮಾತನಾಡುವ ಮೂಲಕ ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತಿದ್ದು, ಕೋಮು ಸೌಹಾರ್ದತೆಯನ್ನು ಕೆಡಿಸಲು ಯತ್ನಿಸುತ್ತಿದ್ದಾರೆ. ಸಂವಿಧಾನ ಬದ್ಧವಾಗಿ ಈ ದೇಶದಲ್ಲಿ ಎಲ್ಲ ಧರ್ಮದವರು ಕೂಡಾ ಸಮಾನವಾಗಿ ಬದುಕಲು ಅಧಿಕಾರ ಕೊಟ್ಟ ಈ ದೇಶದಲ್ಲಿ ಸಂವಿಧಾನವನ್ನು ಅರ್ಥ ಮಾಡಿಕೊಳ್ಳುವ ಸೌಜನ್ಯವೂ ಇಲ್ಲ. ದುಃಖ ಎಂದರೆ ಒಬ್ಬ ಶಿಕ್ಷಕನಾಗಿ ಈ ರೀತಿಯಾಗಿ ಮಾತನಾಡುವುದಿದ್ದರೆ ಸಮಾಜದಲ್ಲಿ ಭವಿಷ್ಯ ಏನಾಗಬಹುದೆಂದು ನಾವೆಲ್ಲರೂ ಆಲೋಚನೆ ಮಾಡಬೇಕಾಗಿದೆ. ಇಂತಹ ಹೇಳಿಕೆಗಳಿಗೆ ಯಾವುದೇ ಪ್ರಚೋದನೆಗೆ ಮುಂದಾಗುವುದಿಲ್ಲ. ರಾಧಾಕೃಷ್ಣ ಅಡ್ಯಂತಾಯ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದರು.
ಸಭೆಯಲ್ಲಿ ಪ್ರಮುಖರಾದ ಅಝೀಝ್ ಸನಾ, ವಿ.ಎಸ್ ಇಬ್ರಾಹಿಂ ಒಕ್ಕೆತ್ತೂರು, ವಿ.ಕೆ.ಎಂ ಅಶ್ರಪ್, ಶಾಕೀರ್ ಅಳಕೆಮಜಲು, ಕರೀಂ ಕುದ್ದುಪದವು, ಅದ್ರಾಮ ಕುರುಂಬಳ, ಹಂಝ ಮೇಗಿನಪೇಟೆ, ಅಬ್ದುಲ್ಲ ಕುಂಞ ಕೊಡಂಗಾಯಿ, ಸುಲೈಮಾನ್ ಒಕ್ಕೆತ್ತೂರು, ರಹೀಂ ಕುಂಡಡ್ಕ, ಅಬ್ದುಲ್ ರಹಿಮಾನ್ ಕಲ್ಲಂಗಳ ಉಪಸ್ಥಿತರಿದ್ದರು.




