ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯನ್ನು ವಿಸರ್ಜಿಸಿದ ಸರ್ಕಾರ
ಬೆಂಗಳೂರು: ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ರೋಹಿತ್ ಚಕ್ರತೀರ್ಥ ನೇತೃತ್ವದ ಕನ್ನಡ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯನ್ನು ವಿಸರ್ಜಿಸುವ ಮೂಲಕ ಸರ್ಕಾರ ವಿವಾದಕ್ಕೆ ತೆರೆ ಎಳೆಯಲು ನಿರ್ಧರಿಸಿದೆ.


ರೋಹಿತ್ ಚಕ್ರತೀರ್ಥ ಅವರ ಸಮಿತಿಯು ಶಾಲಾ ಪಠ್ಯಕ್ಕೆ ಹೆಡ್ಗೇವಾರ್ ಅವರ ಲೇಖನ, ಚಕ್ರವರ್ತಿ ಸೂಲಿಬೆಲೆ ಬರೆದಿರುವ ‘ತಾಯಿ ಭಾರತಿಯ ಅಮರ ಪುತ್ರರು’ ವಿಷಯ ಸೇರ್ಪಡೆ, ಮತ್ತು ಎ.ಎನ್. ಮೂರ್ತಿರಾವ್, ಸಾ.ರಾ. ಅಬ್ಬೂಬಕರ್ ಅವರ ಪಠ್ಯಗಳನ್ನು ಕೈಬಿಟ್ಟಿರುವುದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ದೇವನೂರು ಮಹಾದೇವ ರಂತಹ ಹಿರಿಯ ಸಾಹಿತಿಗಳು ಸಮಿತಿಯ ಈ ನಡೆಯನ್ನು ತೀವ್ರವಾಗಿ ವಿರೋಧಿಸಿದ್ದಲ್ಲದೆ, ತಮ್ಮ ಪಠ್ಯ ಹಿಂತೆಗೆದುಕೊಂಡಿರುವುದಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದರು.ರಾಜ್ಯದಲ್ಲೆಡೆ ಹಲವಾರು ಸಾಹಿತಿಗಳು ಕೂಡ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ನಡೆಯನ್ನು ತೀವ್ರವಾಗಿ ವಿರೋಧಿಸಿದ್ದರು
ಇಷ್ಟೇ ಅಲ್ಲದೆ ರೋಹಿತ್ ಚಕ್ರತೀರ್ಥ ಅವರ ಸಮಿತಿ ಬಸವಣ್ಣ ಕುರಿತ ಪಠ್ಯದಲ್ಲಿ ಲೋಪ ಎಸಗುವ ಮೂಲಕ ಸರ್ಕಾರಕ್ಕೆ ತೀವ್ರ ಮುಜುಗರವನ್ನುಂಟು ಮಾಡಿತ್ತು. ಇನ್ನೊಂದೆಡೆಗೆ ಬಹುತೇಕ ಲಿಂಗಾಯತ ಸ್ವಾಮೀಜಿಗಳು ಕೂಡ ಇದಕ್ಕೆ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದರು. ರೋಹಿತ್ ಚಕ್ರತೀರ್ಥ ಅವರು ಈ ಹಿಂದೆ ಕುವೆಂಪುರವರ ನಾಡಗೀತೆಯನ್ನು ವಿರೂಪಗಳಿಸಿರುವ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ ಸರ್ಕಾರ ಇಕ್ಕಟ್ಟಿಗೆ ಸಿಲುಕಿತು. ಈಗ ಬುಗಿಲೆದ್ದಿರುವ ವಿವಾದವನ್ನು ತಣ್ಣಗಾಗಿಸುವ ನಿಟ್ಟಿನಲ್ಲಿ ಸಚಿವ ಬಿ.ಸಿ.ನಾಗೇಶ್ ನೀಡಿರುವ ವರದಿ ಆಧಿರಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯನ್ನು ವಿಸರ್ಜಿಸಲು ಆದೇಶಿಸಿದ್ದಾರೆ.
ರಾಷ್ಟ್ರಕವಿ ಕುವೆಂಪು ಮತ್ತು ಬಸವಣ್ಣನವರ ಕುರಿತಾದ ಲೇಖನಗಳನ್ನು ಪರಿಷ್ಕರಣೆಗೆ ಸರ್ಕಾರವು ತೀರ್ಮಾನಿಸಿದೆ. ಪರಿಷ್ಕೃತ ಪಠ್ಯದಲ್ಲಿ ಆಕ್ಷೇಪಾರ್ಹ ವಿಷಯಗಳಿದ್ದರೆ ಅದನ್ನು ಪರಿಷ್ಕರಿಸಲು ಸರ್ಕಾರ ಮುಕ್ತ ಮನಸ್ಸನ್ನು ಹೊಂದಿದೆ ಎಂದು ಅವರು ತಿಳಿಸಿದ್ದಾರೆ. ಜೊತೆಗೆ ನಾಡಪ್ರಭು ಕೆಂಪೇಗೌಡ ಅವರ ಜೀವನ ಚರಿತ್ರೆ, ಹಾಗೂ ಇಸ್ಲಾಂ,ಕ್ರೈಸ್ತ ಧರ್ಮದ ಜೊತೆಗೆ ಹಿಂದೂ ಧರ್ಮದ ಬಗ್ಗೆ ಪಠ್ಯದಲ್ಲಿ ಸೇರಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.




