ಎಂಡೋಸಲ್ಫಾನ್ ಪೀಡಿತರನ್ನು ಮುಂದೆ ನಿಲ್ಲಿಸಿ ಚುನಾವಣೆ ಗೆದ್ದ ಹರೀಶ್ ಪೂಂಜ, ಎಂಡೋಸಲ್ಫಾನ್ ಪೀಡಿತರನ್ನು ಕೇಳುವವರೇ ಇಲ್ಲದಂತಾಗಿದೆ: ಶಾಸಕ ಯು.ಟಿ ಖಾದರ್
ಮಂಗಳೂರು: ಮುಸ್ಲಿಂ ಮತ ಬೇಡ ಎನ್ನುವ ಶಾಸಕ ಹರೀಶ್ ಪೂಂಜಾ ಬೆಳ್ತಂಗಡಿಯಲ್ಲಿ ಎಂಡೋಸಲ್ಫಾನ್ ಪೀಡಿತರನ್ನು ಮುಂದೆ ನಿಲ್ಲಿಸಿ ಚುನಾವಣೆ ಗೆದ್ರು, ಇದೀಗ ಎಂಡೋಸಲ್ಫಾನ್ ಪೀಡಿತರನ್ನು ಕೇಳುವವರೇ ಇಲ್ಲದಂತಾಗಿದೆ ಅಂತ ವಿಧಾನಸಭಾ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಕಿಡಿಕಾರಿದ್ದಾರೆ..
ಮಂಗಳೂರಿನಲ್ಲಿ ಮಾತನಾಡಿದ ಅವರು ಶಾಸಕ ಹರೀಶ್ ಪೂಂಜಾರ ಪರಿಪಕ್ವವಲ್ಲದ ಮಾತಿಗೆ ನಾನು ಪ್ರತಿಕ್ರಿಯೆ ಮಾಡೋದಿಲ್ಲ. ಚೀಪ್ ಪಾಲಿಟಿಕ್ಸ್, ಅವರವರ ರಾಜಕೀಯ ಅವರವರದ್ದು. ಬೆಳ್ತಂಗಡಿಯ ಜನತೆ ಇದಕ್ಕೆ ತಕ್ಕ ಉತ್ತರ ಕೊಡುತ್ತಾರೆ. ಯಾರು ಅವರಿಗೆ ವೋಟ್ ಕೊಟ್ಟಿದ್ದಾರೆ ಅವರ ಕೆಲಸವಾದರೂ ಹರೀಶ್ ಪೂಂಜಾ ಮಾಡಲಿ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಇನ್ನು ಮಳಲಿ ಮಸೀದಿ ವಿವಾದದ ಹಿನ್ನೆಲೆಯಲ್ಲಿ ಎರಡೂ ಕಡೆಯವರ ಸಮ್ಮುಖದಲ್ಲಿ ಮಸೀದಿ ದಾಖಲೆಯನ್ನು ಡಿಸಿಯವರಿಗೆ ನೀಡಲಾಗಿದೆ. 300 – 400 ವರ್ಷಗಳಲ್ಲಿ ಅಲ್ಲಿ ಮಸೀದಿಯೇ ಇದೆ. ಇದು ಅಲ್ಲಿನ ಸ್ಥಳೀಯರಿಗೂ ಗೊತ್ತಿದೆ. ಹೊರಗಿನ ಕೆಲವರಿಗೆ ಅದು ಮಸೀದಿಯಲ್ಲ ದೇವಾಲಯ ಎಂಬ ಸಂಶಯ ಬಂದಿದೆ. ಅವರು ಜಿಲ್ಲಾಧಿಕಾರಿಗಳಿಗೆ ದೂರು ಅರ್ಜಿ ನೀಡಿದ್ದಾರೆ.
ಆದ್ದರಿಂದ ಡಿಸಿಯವರು ದಾಖಲೆ ನೀಡಿ ನಿರ್ಧಾರ ಕೈಗೊಳ್ಳಬೇಕು. ಯಾರಿಗೆ ಅಸಮಾಧಾನ ಇದೆಯೋ ಅವರಿಗೆ ಕೋರ್ಟ್ ಇದೆ ಎಂದರು. ಆದ್ದರಿಂದ ಜಿಲ್ಲಾಧಿಕಾರಿಯವರು ಈ ಬಗ್ಗೆ ತಕ್ಷಣ ನ್ಯಾಯ ಕೊಡುವ ಕೆಲಸ ಮಾಡಬೇಕು. ಆದರೆ ಡಿಸಿಯವರು ಯಾರ ಒತ್ತಡದಿಂದ ನಿರ್ಧಾರ ಪ್ರಕಟ ಮಾಡಲು ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ನನಗೆ ಆಶ್ಚರ್ಯವಾಗುತ್ತದೆ ಎಂದು ದ.ಕ.ಜಿಲ್ಲಾಧಿಕಾರಿ ವಿರುದ್ಧ ಖಾದರ್ ಅಸಮಾಧಾನ ವ್ಯಕ್ತಪಡಿಸಿದರು.




