ಉಡುಪಿ: ಮರು ತನಿಖೆಗೆ ದಫನ ಮಾಡಲಾದ ಮೃತದೇಹ ಹೊರತೆಗೆದ ಪೊಲೀಸರು
ಉಡುಪಿ: ಒಂದೂವರೆ ವರ್ಷಗಳ ಹಿಂದೆ ಧಪನ ಮಾಡಲಾದ ಮೃತದೇಹವನ್ನು ಮರು ತನಿಖೆಗೆ ಹೊರತೆಗೆಯಲಾದ ಘಟನೆ ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ನಡೆದಿದೆ.
ಪಂಜಾಬ್ ಮೂಲದ ವ್ಯಕ್ತಿಯೊಬ್ಬರ ಮೃತದೇಹವನ್ನು ಹೆಚ್ಚಿನ ತನಿಖೆಗಾಗಿ ಪಂಜಾಬ್ ಪೊಲೀಸರ ಸಮ್ಮುಖದಲ್ಲಿ ಇಂದು ಹೊರ ತೆಗೆಯಲಾಯಿತು. ಪಂಜಾಬ್ ರಾಜ್ಯದಲ್ಲಿ ನಾಪತ್ತೆಯಾದ ಈ ವ್ಯಕ್ತಿ ಒಂದೂವರೆ ವರ್ಷಗಳ ಹಿಂದೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೃತಪಟ್ಟಿದ್ದರು. ಆದರೆ ಯಾರು ಕೂಡ ವಾರಸುದಾರರು ಸಂಪರ್ಕಿಸದ ಕಾರಣಕ್ಕೆ ಅಜ್ಜರಕಾಡು ಜಿಲ್ಲಾ ಶವಾಗಾರದಲ್ಲಿದ್ದ ಈ ಮೃತದೇಹವನ್ನು ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ಕಾನೂನು ಪ್ರಕ್ರಿಯೆ ನಡೆಸಿ ಧಪನ ಮಾಡಲಾಗಿತ್ತು.
ಈ ಕುರಿತು ಮಾಹಿತಿ ಪಡೆದುಕೊಂಡ ಪಂಜಾಬ್ ಪೊಲೀಸರು, ಮಲ್ಪೆಗೆ ಆಗಮಿಸಿದ್ದು, ಹೆಚ್ಚಿನ ತನಿಖೆಗಾಗಿ ಮೃತದೇಹವನ್ನು ಹೊರ ತೆಗೆಯುವಂತೆ ಸಂಬಂಧಪಟ್ಟವರು ಲಿಖಿತವಾಗಿ ಮನವಿ ಮಾಡಿಕೊಂಡಿದ್ದರು ಎನ್ನಲಾಗಿದೆ. ಅದರಂತೆ ಉಡುಪಿ ತಹಶೀಲ್ದಾರ್ ಅರ್ಚನಾ ಭಟ್, ಮಲ್ಪೆ ಎಸ್ಐ ಶಕ್ತಿವೇಲು ಹಾಗೂ ಪಂಜಾಬ್ ಪೊಲೀಸರ ಸಮ್ಮುಖದಲ್ಲಿ ಇದೀಗ ಮೃತದೇಹವನ್ನು ಹೊರತೆಗೆಯುವ ಪ್ರಕ್ರಿಯೆ ನಡೆಸಲಾಯಿತು.




