ಬೆಳ್ತಂಗಡಿ:ಹಿಂದೂ ಮಹಿಳೆಯನ್ನು ಅರೆ ಬೆತ್ತಲೆಗೊಳಿಸಿ ಹಲ್ಲೆ: ಧರ್ಮಾಧಿಕಾರಿಯವರು ದನಿ ಎತ್ತದೆ ಸುಮ್ಮನಿದ್ದಾರೆ: ಬಿ.ಟಿ.ಲಲಿತಾನಾಯಕ್
ಮೈಸೂರು: ಧರ್ಮಸ್ಥಳ ಸಮೀಪ ಆದಿವಾಸಿ ಮಹಿಳೆಯೊಬ್ಬರನ್ನು ಅರೆಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಅಮಾನವೀಯ ಘಟನೆಯನ್ನು ಜನತಾ ಪಕ್ಷದ ಅಧ್ಯಕ್ಷೆ ಬಿ.ಟಿ.ಲಲಿತಾನಾಯಕ್ ಖಂಡಿಸಿದ್ದಾರೆ.
ಮೈಸೂರಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳದ ಸಮೀಪ ಆದಿವಾಸಿ ಮಹಿಳೆಯೊಬ್ಬರನ್ನು ಅರೆಬೆತ್ತಲೆಗೊಳಿಸಿ ದೌರ್ಜನ್ಯ ಎಸಗಿದ್ದರೂ ಧರ್ಮಾಧಿಕಾರಿಯವರು ದನಿ ಎತ್ತದೆ ಸುಮ್ಮನಿದ್ದಾರೆ. ಧರ್ಮಸ್ಥಳ, ತಿರುಪತಿಗಳು ತಲೆ ಬೋಳಿಸಿ ಕಾಣಿಕೆ ಪಡೆಯುವುದಕ್ಕಾಗಿ ಮಾತ್ರವೇ ಇವೆಯೆ? ಎಂದು ಅವರು ಪ್ರಶ್ನಿಸಿದರು.
ಇಂತಹ ಘಟನೆಗಳು ನಡೆದಾಗ ನೊಂದವರಿಗೆ ಸಾಂತ್ವನ ಹೇಳುವ ಮೂಲಕವಾದರೂ ಕನಿಷ್ಠ ಜನರ ಋಣ ತೀರಿಸಬೇಕು. ಇಂತಹ ಘಟನೆ ನಡೆಯದಂತೆ ಧರ್ಮಾಧಿಕಾರಿಗಳು ಬುದ್ಧಿ ಹೇಳಬೇಕು. ದೇವರು ಹಾಗೂ ಧರ್ಮ ಇರುವುದೇ ಮನುಷ್ಯರನ್ನು ನೋಡುವುದರಲ್ಲಿ ಎಂದು ಪ್ರತಿಪಾದಿಸಿದರು.
ದೇವರು ಹಾಗೂ ಧರ್ಮದ ಮೂಲಾರ್ಥವನ್ನೇ ಕುಲಗೆಡಿಸಲಾಗಿದೆ. ಧರ್ಮದ್ರೋಹ, ರಾಜದ್ರೋಹ, ಜನದ್ರೋಹದ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.





