ವಿಟ್ಲ: ಎರಡು ಕಾರುಗಳ ನಡುವೆ ಭೀಕರ ಅಪಘಾತ: ಒಬ್ಬರು ಸ್ಥಳದಲ್ಲೇ ಮೃತ್ಯು
ವಿಟ್ಲ: ಎರಡು ಕಾರುಗಳು ಪರಸ್ಪರ ಡಿಕ್ಕಿಯಾಗಿ ಬೆಂಗಳೂರು ನಿವಾಸಿಯೊಬ್ಬರು ಮೃತಪಟ್ಟು ನಾಲ್ವರು ಗಾಯಗೊಂಡ ಘಟನೆ ಭಾನುವಾರ ಮುಂಜಾನೆ ಮಾಣಿ ಸಮೀಪ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ.
ಬೆಂಗಳೂರು ಜೆ.ಸಿ.ನಗರದ ಕುರುಬರಹಳ್ಳಿ ನಿವಾಸಿ ಲಕ್ಷ್ಮಣ ಆಚಾರಿ (65) ಮೃತರಾಗಿದ್ದಾರೆ. ಚಾಲಕ ಪ್ರಜ್ವಲ್ (22) ಸಹಿತ ನಾಲ್ವರು ಗಾಯಗೊಂಡಿದ್ದಾರೆ. ಬೆಂಗಳೂರಿನಿಂದ ಬರುತ್ತಿದ್ದ ಕಾರನ್ನು ಪ್ರಜ್ವಲ್ ಚಲಾಯಿಸಿದ್ದು, ಲಕ್ಷ್ಮಣ ಆಚಾರಿ ಅವರು ಪುತ್ರಿಯ ವಿವಾಹ ಆಮಂತ್ರಣ ನೀಡುವ ನಿಟ್ಟಿನಲ್ಲಿ ಊರಿಗೆ ಆಗಮಿಸುತ್ತಿದ್ದರೆನ್ನಲಾಗಿದೆ.
ಮಂಗಳೂರಿನಿಂದ ಮೈಸೂರಿಗೆ ಹೋಗುತ್ತಿದ್ದ ಕಾರಿನವರಿಗೆ ಮಾಣಿ ಜಂಕ್ಷನ್ ನಲ್ಲಿ ರಸ್ತೆ ತಪ್ಪಿ ಬೆಂಗಳೂರು ಮಾರ್ಗದಲ್ಲಿ ಮುಂದುವರಿದ್ದಾರೆ. ಈ ಸಮಯ ಬುಡೋಳಿ ಎಂಬಲ್ಲಿ ಈ ಅಪಘಾತ ನಡೆದಿದೆ. ಪ್ರೆಂಡ್ಸ್ ವಿಟ್ಲ ತಂಡ ವಾಹನವನ್ನು ಸ್ಥಳದಿಂದ ತೆರವು ಮಾಡಿ ಠಾಣೆಗೆ ತಲುಪಿಸಿದೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದೆ.




