ನೆರೆ ಮನೆಯ ನಿವಾಸಿಯ ತಲೆ ಕಡಿದು ಕೊಲೆ: ಕಿರುತೆರೆಯ ಕಲಾವಿದನ ಬಂಧನ
ಚಿತ್ರದುರ್ಗ: ಇಲ್ಲಿಗೆ ಸಮೀಪದ ಶ್ರಾವಣಗೆರೆಯಲ್ಲಿ ನೆರೆ ಮನೆಯ ನಿವಾಸಿಯ ತಲೆ ಕಡಿದು ಜಮೀನಿನಲ್ಲಿ ಹೂತಿಟ್ಟ ಆರೋಪದ ಮೇರೆಗೆ ಕಿರುತೆರೆಯ ಸಹಕಲಾವಿದನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಿರಿಯೂರು ತಾಲ್ಲೂಕಿನ ಶ್ರಾವಣಗೆರೆಯ ನಿವಾಸಿ ರಮೇಶ (45) ಕೊಲೆಯಾದ ವ್ಯಕ್ತಿ. ಕೊಲೆ ಆರೋಪದ ಮೇರೆಗೆ ಶ್ರೀನಿವಾಸ (40) ಎಂಬಾತನನ್ನು ಅಬ್ಬಿನಹೊಳೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಶ್ರೀನಿವಾಸ ಹಲವು ಧಾರಾವಾಹಿಗಳಲ್ಲಿ ಸಹಕಲಾವಿದನಾಗಿ ನಟಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಮೇಶ ಮತ್ತು ಶ್ರೀನಿವಾಸ ನೆರೆ ಮನೆಯ ನಿವಾಸಿಗಳು. ಹಲವು ವರ್ಷಗಳಿಂದ ಇಬ್ಬರೂ ಬೆಂಗಳೂರಿನಲ್ಲಿ ವಾಸವಾಗಿದ್ದರು. ಯುಗಾದಿ ಹಬ್ಬಕ್ಕೆ ಹಳ್ಳಿಗೆ ಮರಳಿದ್ದರು. ಕೊಲೆಗೆ ಹಳೆ ವೈಷಮ್ಯ, ವಾಮಾಚಾರ ಕಾರಣ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.




