ಶೂ ಧರಿಸಿ ಸ್ವಾಮೀಜಿಯೊಂದಿಗೆ ಕುಳಿತ ಕೇಂದ್ರ ಗೃಹ ಸಚಿವ ಅಮಿತ್ ಶಾ: ವ್ಯಾಪಕ ಟೀಕೆ
ತುಮಕೂರು: ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿಯವರ 115ನೇ ಗುರುವಂದನಾ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶೂ ಧರಿಸಿ ಕುಳಿತ ಭಂಗಿ ಇದೀಗ ವ್ಯಾಪಕ ಟೀಕೆಗೆ ಕಾರಣವಾಗಿದೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ನಾರಾಯಣಸ್ವಾಮಿ, ಯಡಿಯೂರಪ್ಪ, ಸುತ್ತೂರು ಮತ್ತು ಸಿದ್ದಗಂಗಾ ಮಠದ ಸ್ವಾಮೀಜಿಗಳು ವೇದಿಕೆಯಲ್ಲಿದ್ದರು. ಅಮಿತ್ ಶಾ ಅವರು ಸುತ್ತೂರು ಮತ್ತು ಸಿದ್ದಗಂಗಾ ಮಠದ ಸ್ವಾಮೀಜಿಗಳ ಮಧ್ಯದ ಆಸನದಲ್ಲಿ ಕುಳಿತಿದ್ದರು.
ಆದರೆ ಸ್ವಾಮೀಜಿಗಳಿಬ್ಬರ ಮಧ್ಯೆ ಅವರು ಶೂ ಧರಿಸಿ, ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಂಡ ಫೋಟೋ ಇದೀಗ ವೈರಲ್ ಆಗಿದ್ದು, ವಿರೋಧ ಪಕ್ಷ ಕಾಂಗ್ರೆಸ್ ಸೇರಿದಂತೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಕಾರಣವಾಗಿದೆ.
ಮಾತೆತ್ತಿದ್ದರೆ ಹಿಂದೂ ಸಮಾಜದ ಉದ್ದಾರ ಎನ್ನುವ ಬಿಜೆಪಿ ನಾಯಕರಿಗೆ ಸಂಪ್ರದಾಯ, ಶ್ರೀಗಳಿಗೆ ಗೌರವ ಕೊಡುವ ಬಗೆ ಗೊತ್ತಿಲ್ಲವೇ ಎಂದು ಕಾಂಗ್ರೆಸ್ ಮುಖಂಡರು ಟೀಕಿಸುತ್ತಿದ್ದಾರೆ. ಅಲ್ಲದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಿದ್ದಗಂಗಾ ಮಠಕ್ಕೆ ಹೋದಾಗ ನಡೆದುಕೊಂಡ ರೀತಿಯ ಬಗ್ಗೆಯೂ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಕಾಂಗ್ರೆಸ್ಸಿಗರು ಶಾ ಅವರನ್ನು ಟೀಕಿಸುತ್ತಿದ್ದಾರೆ.




