ಬಿಜೆಪಿ ಮುಖಂಡನನ್ನು ಗುಂಡಿಟ್ಟು ಹತ್ಯೆ
ಮಹಾರಾಜ್ಗಂಜ್: ಬಿಜೆಪಿ ಯುವ ಘಟಕದ ಮಾಜಿ ಕಾರ್ಯದರ್ಶಿ ಮತ್ತು ವಕೀಲ ಗೌರವ್ ಜೈಸ್ವಾಲ್ (35) ಅವರನ್ನ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮಹಾರಾಜ್ಗಂಜ್ ಜಿಲ್ಲೆಯಲ್ಲಿ ನಡೆದಿದೆ.
ಪೊಲೀಸರ ಪ್ರಕಾರ, ದುಷ್ಕರ್ಮಿಗಳು ಜೈಸ್ವಾಲ್ ಅವರ ಹಣೆಗೆ ಶೂಟ್ ಮಾಡಿ, ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ಎಫ್ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಮಹಾರಾಜ್ಗಂಜ್ ನಗರ ಪಾಲಿಕೆಯ ಅಧ್ಯಕ್ಷ ಕೃಷ್ಣ ಗೋಪಾಲ್ ಜೈಸ್ವಾಲ್ ಅವರ ಅಳಿಯನಾಗಿದ್ದ ಜೈಸ್ವಾಲ್, ಸಕ್ರಿಯ ಬಿಜೆಪಿ ಕಾರ್ಯಕರ್ತರಾಗಿದ್ದರು ಮತ್ತು ಪಕ್ಷದ ಸ್ವಚ್ಛತಾ ಅಭಿಯಾನದ ಸಹ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಜೈಸ್ವಾಲ್ ಅವರ ಸಾವಿನ ಸುದ್ದಿ ಹರಡುತ್ತಿದ್ದಂತೆ ಆ ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಆರೋಪಿಗಳ ಪತ್ತೆಗೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ಮಾರುಕಟ್ಟೆಯನ್ನು ಮುಚ್ಚಲಾಗಿದೆ.
ಸದರ್ ಪೊಲೀಸ್ ವೃತ್ತದ ಅಡಿಯಲ್ಲಿ ಚಿಯುರಾಹಾ ಕ್ರಾಸಿಂಗ್ ಬಳಿಯಿರುವ ಬಿರಿಯಾನಿ ಶಾಪ್ ಬಳಿ ಜೈಸ್ವಾಲ್ ಕುಳಿತಿದ್ದಾಗ ಘಟನೆ ನಡೆದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಜೈಸ್ವಾಲ್ ಅವರೊಂದಿಗೆ ದುಷ್ಕರ್ಮಿಗಳು ವಾಗ್ವಾದ ನಡೆಸಿದ್ದಾರೆ ಬಳಿಕ ಏಕಾಏಕಿ ಗುಂಡು ಹಾರಿಸಿದ್ದಾರೆ.
ಕೂಡಲೇ ಜೈಸ್ವಾಲ್ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ, ಆ ವೇಳೆಗಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ಮಹಾರಾಜ್ಗಂಜ್ ಎಸ್ಪಿ ಪ್ರದೀಪ್ ಗುಪ್ತಾ ತಿಳಿಸಿದ್ದಾರೆ




