ಸಿದ್ದರಾಮಯ್ಯ ರೈಲಿನಲ್ಲಿ ಬೆಂಕಿ ಹಾಕಿ ಕೊಂದವರ ಮನೆಗೆ ಹೋಗಿ ಬರಲಿ: ಕಲ್ಲಡ್ಕ ಪ್ರಭಾಕರ್ ಭಟ್
ಮಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೋದ್ರಾಕ್ಕೆ ಒಮ್ಮೆ ಭೇಟಿ ನೀಡಿ ಬರಲಿ. ರೈಲಿನಲ್ಲಿ ಬೆಂಕಿ ಹಾಕಿ ಕೊಂದವರ ಮನೆಗೆ ಹೋಗಿ ಬರಲಿ. ಗೋದ್ರಾದಲ್ಲಿ ಮುಸ್ಲಿಮರು ಮಾಡಿದ ಅತ್ಯಾಚಾರವನ್ನು ಯಾವುದೇ ನಾಗರಿಕ ಸಮಾಜ ಒಪ್ಪಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ ಎಂದು ಆರ್ಎಸ್ಎಸ್ ಮುಖಂಡ ಪ್ರಭಾಕರ್ ಭಟ್ ಕಲ್ಲಡ್ಕ ಟೀಕಿಸಿದರು.
ಕುತ್ಯಾರ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು.
ಹಿಜಾಬ್ ಪ್ರಕರಣದಲ್ಲಿ ಹಿಜಾಬ್ ಅವರಿಗೆ ದೊಡ್ಡ ವಿಷಯವಾಗಲಿಲ್ಲ. ಆದರೆ ಅಲ್ಲಿನ ಹುಡುಗರು ಕೇಸರಿ ಶಾಲು ಹಾಕಿದ್ದು ದೊಡ್ಡ ವಿಷಯವಾಯಿತು. ಅದನ್ನೇ ಇಟ್ಟುಕೊಂಡು ಗೋದ್ರಾ ವಿಷಯದ ಬಗ್ಗೆ ಮಾತನಾಡುತ್ತಿದ್ದಾರೆ. ಇವತ್ತಿನವರೆಗೆ ಯಾವುದೇ ಹಿಂದೂ ಕ್ರಿಯೆ ಮಾಡಿಲ್ಲ, ಬದಲಾಗಿ ಕ್ರಿಯೆಗೆ ಪ್ರತಿಕ್ರಿಯೆ ನೀಡಿದ್ದಾನೆ. ನಾವು ಸಾಯಬೇಕಾ, ನಮ್ಮ ಬದುಕಿಗಾಗಿ ಹೋರಾಟ ಮಾಡುವುದು ಅನಿವಾರ್ಯ. ನೀವು ಕ್ರಿಯೆಯನ್ನು ನಿಲ್ಲಿಸಿದರೆ ಪ್ರತಿಕ್ರಿಯೆ ತಾನಾಗಿಯೇ ನಿಲ್ಲುತ್ತದೆ. ಹಿಜಾಬ್ ಬಗ್ಗೆ ಮಾತನಾಡುವುದಕ್ಕೆ ಅವರಿಗೆ ಧೈರ್ಯವಿಲ್ಲ. ಮತ ಬ್ಯಾಂಕ್ ಕಳೆದುಕೊಳ್ಳುವ ಭಯ ಸಿದ್ದರಾಮಯ್ಯ ಅವರನ್ನು ಕಾಡುತ್ತಿದೆ. ಬಾಯಿ ಬಿಟ್ಟು ಮಾತನಾಡಿ ನ್ಯಾಯ ಕೊಡಿ ಎಂದು ಸವಾಲು ಹಾಕಿದರು.
5 ವರ್ಷಗಳ ಕಾಲ ಮುಖ್ಯಮಂತ್ರಿ ಆಗಿದ್ದು ಕೆಲಸ ಮಾಡಿದ್ದೀರಿ, ಹುಚ್ಚುಚ್ಚಾಗಿ ಮಾತನಾಡಬೇಡಿ. 56 ಮಂದಿಯನ್ನು ಬೆಂಕಿ ಹಾಕಿ ರೈಲಿನಲ್ಲಿ ಕೊಂದ್ರಲ್ಲ ಅವರ ಮನೆಗೆ ಒಮ್ಮೆ ಹೋಗಿ ಬನ್ನಿ. ನಿಮ್ಮ ಬಗ್ಗೆ ಒಳ್ಳೆಯ ಭಾವನೆ, ಅಭಿಪ್ರಾಯ ಇದೆ, ಅದನ್ನು ಹಾಳು ಮಾಡಿಕೊಳ್ಳಬೇಡಿ. ದನ ಮಾಂಸ ತಿನ್ನುತ್ತೇನೆ ಎಂದು ಕೆಟ್ಟದಾಗಿ ಮಾತನಾಡುವುದನ್ನು ಮೊದಲು ನಿಲ್ಲಿಸಿ. ಅವರ ತಾಯಿ, ಪತ್ನಿ ದೇವರ ಪೂಜೆ ಮಾಡಿದ ಪುಣ್ಯದ ಫಲವಾಗಿ ಅವರು ಬದುಕಿದ್ದಾರೆ. ಹಿಂದೂ ಸಮಾಜವನ್ನು ಹೀಯಾಳಿಸುವ ಕೆಲಸ ಮಾಡಬೇಡಿ. ಹಿಂದೂ ಸಮಾಜ ಉಳಿದರೆ ಜಗತ್ತು ಉಳಿಯುತ್ತದೆ ಎಂದು ಪ್ರಭಾಕರ ಭಟ್ ಹೇಳಿದರು.




