ರಷ್ಯಾ-ಉಕ್ರೇನ್ ಯುದ್ಧ ಸಂತ್ರಸ್ತ ವಿದ್ಯಾರ್ಥಿಗಳಿಗೆ ದ.ಕ ಜಿಲ್ಲೆಯ ಮೆಡಿಕಲ್ ಕಾಲೇಜುಗಳು ಉಚಿತ ವಿದ್ಯಾಭ್ಯಾಸ ನೀಡಲಿ: ಡಿಎಚ್ಎಸ್ ಅಧ್ಯಕ್ಷ ಶೇಖರ್ ಲಾಯಿಲ ಒತ್ತಾಯ.
ಬೆಳ್ತಂಗಡಿ: ರಷ್ಯಾ-ಉಕ್ರೇನ್ ಯುದ್ಧ ನಾಡಿನಲ್ಲಿ ಸಿಲುಕಿದ ದ.ಕ ಜಿಲ್ಲೆಯ ವಿದ್ಯಾರ್ಥಿಗಳಿಗೆ ದ.ಕ ಜಿಲ್ಲೆಯ ಮೆಡಿಕಲ್ ಕಾಲೇಜುಗಳು ಉಚಿತವಾಗಿ ವಿದ್ಯಾಭ್ಯಾಸ ನೀಡಲಿ ಎಂದು ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ಶೇಖರ್ ಲಾಯಿಲ ಒತ್ತಾಯಿಸಿದ್ದಾರೆ.
ದ.ಕ ಜಿಲ್ಲೆಯ ವಿದ್ಯಾರ್ಥಿಗಳು ಇಲ್ಲಿನ ಮೆಡಿಕಲ್ ಕಾಲೇಜುಗಳ ಡೊನೇಷನ್ ಮಾಫಿಯಾಕ್ಕೆ ಬಲಿಯಾಗಿ ಉಕ್ರೇನ್ ದೇಶದಲ್ಲಿ ಅತ್ಯಂತ ಕಡಿಮೆಯಲ್ಲಿ ವಿದ್ಯಾಭ್ಯಾಸ ಮಾಡಲು ಹೋಗಿದ್ದರು. ಆದರೆ ರಷ್ಯಾ ಉಕ್ರೇನ್ ಯುದ್ಧದಲ್ಲಿ ತಮ್ಮ ಪ್ರಾಣ ಉಳಿಸಿಕೊಂಡು ಊರಿಗೆ ಮರಳಿದ ವಿದ್ಯಾರ್ಥಿಗಳಿಗೆ ತಮ್ಮ ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಉಚಿತ ವಿದ್ಯಾಭ್ಯಾಸ ಮಾಡಲು ಅವಕಾಶ ನೀಡುವ ಮೂಲಕ ತುಳುನಾಡಿನ ಹಿರಿಮೆಯನ್ನು ಎತ್ತಿ ಹಿಡಿದು ಇತರರಿಗೆ ಮಾದರಿಯಾಗಲಿ. ದೇಶದಲ್ಲಿ ಸಿಇಟಿ , ನೀಟ್ ಸೇರಿದಂತೆ ಹಲವಾರು ಪರೀಕ್ಷೆಗಳ ಮೂಲಕ 90% ಮಾರ್ಕ್ ಪಡೆದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಸಮುದಾಯವನ್ನು ಬಲಿಪಶುಗಳಾಗಿ ಮಾಡಲಾಗುತ್ತದೆ.
ಇನ್ನೊಂದೆಡೆ ಖಾಸಗಿ ವೈದ್ಯಕೀಯ ಕಾಲೇಜುಗಳ ಡೊನೇಷನ್ ಮಾಫಿಯಾದಿಂದ ಬೆಸೆತ್ತು ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಉಕ್ರೇನ್ ಗೆ ತೆರಳಿದ ಅವರು ಯುದ್ಧದ ಕಾರಣಕ್ಕಾಗಿ ತಮ್ಮ ವಿದ್ಯಾಭ್ಯಾಸವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ಅನಿವಾರ್ಯವಾಗಿ ಊರಿಗೆ ಬರುತ್ತಿದ್ದು , ಅವರಿಗೆ ದ.ಕ ಜಿಲ್ಲೆಯ ಮೆಡಿಕಲ್ ಕಾಲೇಜುಗಳು ಉಚಿತವಾಗಿ ವಿದ್ಯಾಭ್ಯಾಸ ನೀಡಲಿ ಎಂದರು. ಈ ಬಗ್ಗೆ ರಾಜ್ಯ ಸರ್ಕಾರ ಮುತುವರ್ಜಿ ವಹಿಸುವ ಮೂಲಕ ಯುದ್ಧ ಸಂತ್ರಸ್ತ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಂದುವರಿಸಲು ಅವಕಾಶ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.




