ಮಂಗಳೂರು: ಹಿಜಾಬ್ ಧರಿಸಿದ 2 ಕಾಲೇಜುಗಳ 28 ವಿದ್ಯಾರ್ಥಿಗಳು ಮನೆಗೆ
ಮಂಗಳೂರು: ನಗರದಲ್ಲಿ ಹಿಜಾಬ್ ಧರಿಸಿ ಕಾಲೇಜಿಗೆ ಬಂದಿರುವ 28 ವಿದ್ಯಾರ್ಥಿನಿಯರು ನ್ಯಾಯಾಲಯದ ಆದೇಶ ಬರುವವರೆಗೆ ಕಾಲೇಜಿಗೆ ಹಾಜರಾಗದಿರಲು ನಿರ್ಧರಿಸಿ ಮರಳಿ ಮನೆಗೆ ವಾಪಸ್ ಆಗಿದ್ದಾರೆ.
ಹಿಜಾಬ್ ಕೇಸರಿ ಶಾಲು ವಿವಾದದಿಂದ ವಾರಗಳ ಕಾಲ ಶಾಲಾ ಕಾಲೇಜುಗಳಿಗೆ ರಜೆ ಇದ್ದು, ಇಂದು ಪುನರಾರಂಭಗೊಂಡಿತ್ತು. ಶಾಂತಿಯುತವಾಗಿ ಎಲ್ಲಾ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿದ್ದರು. ಆದರೆ ಆರು ಕಾಲೇಜಿನ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಕಾಲೇಜಿಗೆ ಹಾಜರಾಗಿದ್ದರು.
ತಕ್ಷಣ ಕಾಲೇಜು ಆಡಳಿತ ಮಂಡಳಿ ಪ್ರಾಂಶುಪಾಲರ ಕೊಠಡಿಗೆ ಈ ವಿದ್ಯಾರ್ಥಿನಿಯರನ್ನು ಕರೆಸಿ ನ್ಯಾಯಾಲಯದ ಸೂಚನೆಯನ್ನು ತಿಳಿಸಿ ಮನವರಿಕೆಗೆ ಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾಲ್ಕು ಕಾಲೇಜಿನ ವಿದ್ಯಾರ್ಥಿಗಳು ಹಿಜಾಬ್ ತೆಗೆದು ತರಗತಿಗೆ ಹಾಜರಾಗಿದ್ದರು.
ಆದರೆ ನಗರದ ಕಿನ್ನಿಗೋಳಿಯ ಪಾಂಪೈ ಕಾಲೇಜಿನ 26 ವಿದ್ಯಾರ್ಥಿನಿಯರು, ಮಂಗಳೂರಿನ ದಯಾನಂದ ಪೈ ಪ್ರಥಮ ದರ್ಜೆ ಕಾಲೇಜಿನ 2 ವಿದ್ಯಾರ್ಥಿನಿಯರು ವಾಪಸ್ ಹೋಗಿದ್ದಾರೆ. ಯಾವುದೇ ವಿವಾದ, ಗೊಂದಲವಿಲ್ಲದೆ ಸಮಸ್ಯೆ ಅಂತ್ಯಗೊಂಡಿದೆ. ಅಲ್ಲದೆ ಕೇಸರಿ ಗಲಭೆಯೂ ಎಲ್ಲೂ ನಡೆದಿಲ್ಲ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹೇಳಿದ್ದಾರೆ.




