ಸುಳ್ಯ: ಅಪಘಾತದಲ್ಲಿ ಪತ್ತೆಯಾದ ಭಿನ್ನ ಕೋಮಿನ ಜೋಡಿ ಪ್ರಕರಣಕ್ಕೆ ತಿರುವು: ಹಿಂದೂ ಸಂಘಟನಾ ಕಾರ್ಯಕರ್ತರ ಮೇಲೆ ದೂರು ನೀಡಿದ ಜೋಡಿ
ಸುಳ್ಯ: ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ ಅದರಲ್ಲಿದ್ದ ಅನ್ಯಕೋಮಿನ ಯುವಕ-ಯುವತಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಬೆನ್ನಲ್ಲೇ ಅವರ ಮೇಲೆ ಹಲ್ಲೆ ನಡೆಸಲು ಬಂದ ಆರೋಪದಲ್ಲಿ ಹಿಂದೂ ಸಂಘಟನೆಯ ನಾಲ್ಕು ಮಂದಿ ಕಾರ್ಯಕರ್ತರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎನ್ನಲಾಗಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ಮೂಲದ ಅನ್ಯಕೋಮಿನ ಯುವಕ ಮತ್ತು ಯುವತಿ ಇವರಿಬ್ಬರು ಕೇರಳದ ಬಂದಡ್ಕ ಕಡೆಯಿಂದ ಕಾರಿನಲ್ಲಿ ಕೋಲ್ಚಾರು ಮಾರ್ಗವಾಗಿ ಬರುತ್ತಿದ್ದ ಸಂದರ್ಭ ಫೆಬ್ರವರಿ 8 ರಂದು ಸುಳ್ಯ ಸಮೀಪ ನಾಗಪಟ್ಟಣ ಎಂಬಲ್ಲಿ ಅತಿ ವೇಗವಾಗಿ ಬಂದ ಕಾರು ಪಲ್ಟಿಯಾಗಿ ಬಿದ್ದಿದೆ.
ಅಪಘಾತದ ಘಟನೆಯಿಂದ ಕಾರಲ್ಲಿದ್ದ ಇಬ್ಬರು ಸಣ್ಣ ಪುಟ್ಟ ಗಾಯಗೊಂಡು ಪ್ರಾಣಾ ಪಾಯದಿಂದ ಪಾರಾಗಿದ್ದರು. ಈ ವೇಳೆ ವಿಷಯ ತಿಳಿದ ಹಿಂದೂ ಸಂಘಟನೆ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದ್ದರು. ಅವರು ಕಾರನ್ನು ಬಹಳ ದೂರದಿಂದಲೇ ಹಿಂಬಾಲಿಸಿಕೊಂಡು ಬಂದಿದ್ದರು. ಅಪಘಾತವಾದ ಸಂದರ್ಭದಲ್ಲಿ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಯುವಕ-ಯುವತಿ ಸುಳ್ಯ ಠಾಣೆಯಲ್ಲಿ ದೂರು ನೀಡಿದ್ದು ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.





