ಉಡುಪಿ-ಕುಂದಾಪುರ ಹಿಜಾಬ್ ವಿವಾದ: ಶಶಿ ತರೂರ್, ಮೆಹಬೂಬಾ ಮುಫ್ತಿ ಪ್ರತಿಕ್ರಿಯಿಸಿದ್ದು ಹೀಗೆ…
ಉಡುಪಿ: ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಿಂಗಳಿಂದ ನಡೆಯುತ್ತಿರುವ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಇದೀಗ ಮತ್ತಷ್ಟು ತಾರಕಕ್ಕೇರಿದೆ. ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿ ಪ್ರಾಂಶುಪಾಲರು ಕಾಲೇಜಿನ ಗೇಟನ್ನು ಬಂದ್ ಮಾಡಿದ ಹಿನ್ನೆಲೆಯಲ್ಲಿ ಘಟನೆ ಸಂಬಂಧ ಕಾಂಗ್ರೆಸ್ ನಾಯಕ ಶಶಿ ತರೂರ್ ಹಾಗೂ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಕಿಡಿಕಾರಿದ್ದಾರೆ.
ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಮೆಹಬೂಬಾ ಮುಫ್ತಿಯವರು, ಸರ್ಕಾರ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ನೀಡಿದ ಬೇಟಿ ಬಚಾವೋ ಬೇಟಿ ಪಢಾವೋ ಘೋಷವಾಕ್ಯಗಳೆಲ್ಲಾ ಬರೀ ಟೊಳ್ಳು. ಮುಸ್ಲಿಂ ಹೆಣ್ಣುಮಕ್ಕಳು ತಮ್ಮ ಸಾಂಪ್ರದಾಯಿಕ ಉಡುಗೆ ಧರಿಸಿದ್ದಕ್ಕೆ ಅವರನ್ನು ಶಿಕ್ಷಣದಿಂದ ವಂಚಿತರನ್ನಾಗಿಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ತರೂರ್ ಟ್ವೀಟ್ ಮಾಡಿ, ಪ್ರತಿಯೊಬ್ಬರೂ ತಮಗೆ ಬೇಕಾದುದನ್ನು ಧರಿಸಲು ಸ್ವತಂತ್ರರು ಎಂಬುದು ಭಾರತದ ಶಕ್ತಿಯಾಗಿದೆ. ಹಿಜಾಬ್ ಅನ್ನು ಅನುಮತಿಸದಿದ್ದರೆ, ಸಿಖ್ ಪೇಟದ ಬಗ್ಗೆ ಏನು? ಹಿಂದೂಗಳ ಹಣೆಯ ಗುರುತು? ಕ್ರಿಶ್ಚಿಯನ್ನರ ಶಿಲುಬೆಗೆ ಯಾಕೆ ಅನುಮತಿ ನೀಡಲಾಗಿದೆ ವಿದ್ಯಾರ್ಥಿನಿಯರನ್ನು ಒಳಗೆ ಬಿಡಿ,ಓದಲು ಬಿಡಿ, ವಸ್ತ್ರಧಾರಣೆಯ ನಿರ್ಧಾರ ಸಂತ್ರಸ್ಥರು ನಿರ್ಧರಿಸಲಿ ಎಂದು ತಿಳಿಸಿದ್ದಾರೆ.




