‘ಬೇಟಿ ಬಚಾವೋ ಬೇಟಿ ಪಡಾವೋ’ ಹೇಳ್ತಾರೆ – ಮುಸ್ಲಿಂ ವಿದ್ಯಾರ್ಥಿನಿಯರಿಗೆ ಶಿಕ್ಷಣದ ಹಕ್ಕನ್ನು ಮೊಟಕುಗೊಳಿಸಲು ಹರಸಾಹಸ ಪಡುತ್ತಿದ್ದಾರೆ: ಮೆಹಬೂಬಾ ಮುಫ್ತಿ
ಹೊಸದಿಲ್ಲಿ: ಕರ್ನಾಟಕದ ಕಾಲೇಜುಗಳಲ್ಲಿ ಹಿಜಾಬ್ ಕಾರಣ ಮುಂದಿಟ್ಟು ವಿದ್ಯಾರ್ಥಿನಿಯರ ಶಿಕ್ಷಣದ ಹಕ್ಕು ಮೊಟಕುಗೊಳಿಸುತ್ತಿದ್ದಾರೆಂಬ ಆರೋಪದ ಕುರಿತಂತೆ ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
‘ಬೇಟಿ ಬಚಾವೋ ಬೇಟಿ ಪಡಾವೋ’ ಎಂಬುದು ಮತ್ತೊಂದು ಪೊಳ್ಳು ಘೋಷಣೆಯಾಗಿದೆ. ಮುಸಲ್ಮಾನ ಹೆಣ್ಣುಮಕ್ಕಳಿಗೆ ತಮ್ಮ ಉಡುಗೆ ತೊಡುಗೆಗಳಿಂದಾಗಿ ಶಿಕ್ಷಣದ ಹಕ್ಕನ್ನು ನಿರಾಕರಿಸುತ್ತಿದ್ದಾರೆ. ಮುಸ್ಲಿಮರನ್ನು ಕಡೆಗಣಿಸುವುದನ್ನು ಕಾನೂನುಬದ್ಧಗೊಳಿಸುವುದು ಗಾಂಧಿಯವರ ಭಾರತವನ್ನು ಗೋಡ್ಸೆಯ ಭಾರತವನ್ನಾಗಿ ಪರಿವರ್ತಿಸುವ ಇನ್ನೊಂದು ಹೆಜ್ಜೆಯಾಗಿದೆ ಎಂದು ಮುಫ್ತಿ ಟ್ವೀಟ್ ಮಾಡಿದ್ದಾರೆ.
ಬಿಜೆಪಿಯು ದೇಶದ ವಾತಾವಾರಣವನ್ನು ಹದಗೆಡಿಸುತ್ತಿದೆ ಎಂದು ಮುಫ್ತಿ ದೂರಿದ್ದಾರೆ. ಬಿಜೆಪಿಯ ದೇಶದಲ್ಲಿ ಒಂದು ಭಾಷೆ, ಒಂದು ಧರ್ಮ, ಒಂದು ಸಂಸ್ಕೃತಿಯನ್ನು ಹೇರುತ್ತಿದೆ. ಇದರಿಂದ ದೇಶದ ಬಹುತ್ವಕ್ಕೆ ಉಳಿಗಾಲವಿಲ್ಲ ಎಂದು ಅವರು ಹೇಳಿದ್ದಾರೆ.
ಜಾತ್ಯಾತೀತ ತತ್ವದ ಆಧಾರದ ಮೇಲೆ ಈ ದೇಶವನ್ನು ಕಟ್ಟಲಾಗಿದೆ. ಪ್ರತಿ ವ್ಯಕ್ತಿಗೂ ಸ್ವಾತಂತ್ರ್ಯದ ಹಕ್ಕು ಇದೆ. ಈ ಕ್ರಮವನ್ನು ನಾವು ವಿರೋಧಿಸುತ್ತೇವೆ ಎಂದು ಮುಫ್ತಿ ಹೇಳಿದ್ದಾರೆ.




