ಬೀದಿ ನಾಯಿಗಳ ಮೇಲೆ ಕಾರು ಹತ್ತಿಸಲು ಯತ್ನ: ಟಿಟಿಡಿ ಮಾಜಿ ಅಧ್ಯಕ್ಷ ದಿ.ಆದಿಕೇಶವಲು ಮೊಮ್ಮಗನ ಬಂಧನ
ಬೆಂಗಳೂರು: ಬೀದಿ ನಾಯಿ ಮೇಲೆ ಕಾರು ಹತ್ತಿಸಲು ಯತ್ನಿಸಿದ್ದ ಉದ್ಯಮಿ ಹಾಗೂ ಟಿಟಿಡಿ ಮಾಜಿ ಅಧ್ಯಕ್ಷ ದಿ.ಆದಿಕೇಶವಲು ಮೊಮ್ಮಗನನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ.
ಬೀದಿಯಲ್ಲಿ ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಲು ಪ್ರಯತ್ನಿಸಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸಾರ್ವಜನಿಕ ವಲಯದಲ್ಲಿ ಆರೋಪಿ ಆದಿ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಸ್ಥಳೀಯರ ದೂರು ನೀಡಿದ ಹಿನ್ನೆಲೆ ಆರೋಪಿ ಆದಿಯನ್ನು ಪೊಲೀಸರು ಬಂಧಿಸಿದ್ದರು. ಕಾರ್ ಹತ್ತಿಸಲು ಯತ್ನಿಸಿದ್ದ ಎಲ್ಲ ದೃಶ್ಯಗಳು ಮನೆಯ ಮುಂಭಾಗದಲ್ಲಿ ಅಳವಡಿಸಲಾಗಿದ್ದ, ಸಿಸಿಟಿವಿಯಲ್ಲಿ ಸೆರೆಯಾಗಿದ್ದವು.
ಜನವರಿ 26ರಂದು ಸಂಜೆ 6.15ಕ್ಕೆ ಜಯನಗರ 1ನೇ ಬ್ಲಾಕ್ 10ನೇ ಬಿ ಮುಖ್ಯರಸ್ತೆ ಮನೆಯೊಂದರ ಮುಂಭಾಗದಲ್ಲಿ ಬೀದಿ ನಾಯಿಯೊಂದು ಮಲಗಿತ್ತು. ಅಲ್ಲಿಗೆ ಬಂದ ಬಿಳಿ ಬಣ್ಣದ ಆಡಿ ಕಾರ್ ವೇಗವಾಗಿ ಬಂದು ನಾಯಿ ಮೇಲೆ ಹತ್ತಿಸಲು ಪ್ರಯತ್ನಿಸಲಾಗಿತ್ತು. ಈ ವೇಳೆ ಕಾರು ತಗುಲಿದ್ದರಿಂದ ನಾಯಿ ಗಾಯಗೊಂಡಿತ್ತು. ಸಂಪೂರ್ಣ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.




