ಉಪ್ಪಿನಂಗಡಿ: ಚಿನ್ನಾಭರಣ ಅಂಗಡಿಯಿಂದ ಕಳವು ಪ್ರಕರಣ: ಜಮೀಲ್ ಚಾಚಾ ರಾಜಸ್ಥಾನದಲ್ಲಿ ಬಂಧನ
ಉಪ್ಪಿನಂಗಡಿ : ಇಲ್ಲಿನ ಚಿನ್ನಾಭರಣ ಅಂಗಡಿಯಿಂದ 2019 ರಲ್ಲಿ ಚಿನ್ನಾಭರಣವನ್ನು ಕಳ್ಳತನ ಮಾಡಿದ ಪ್ರಕರಣದಲ್ಲಿ ಬಂಧಿತನಾಗಿ ಜಾಮೀನು ಪಡೆದ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ 3 ವರ್ಷದಿಂದ ತಲೆಮರೆಯಿಸಿಕೊಂಡಿದ್ದ ವಾರಂಟ್ ಆರೋಪಿ ಜಮೀಲ್ ಚಾಚಾ ಎಂಬಾತನನ್ನು ಉಪ್ಪಿನಂಗಡಿ ಪೊಲೀಸರು ರಾಜಸ್ಥಾನದಿಂದ ಪತ್ತೆ ಹಚ್ಚಿ ಬಂದಿಸಿದ್ದಾರೆ.
ರಾಜಸ್ಥಾನದ ಬೊಂದಿ ಜಿಲ್ಲೆಯ ಡೊಂಗ್ರಿ ಗ್ರಾಮದ ಗುರುದ್ವಾರ ಬಳಿಯ ನಿವಾಸಿ ಮಹಮ್ಮದ್ ಎಂಬವರ ಮಗನಾದ ಜಮೀಲ್ ಚಾಚಾ (62) ಉಪ್ಪಿನಂಗಡಿಯ ಚಿನ್ನಾಭರಣ ಮಳಿಗೆಯಿಂದ ಒಂದಿನಿತೂ ಸುಳಿವು ಸಿಗದಂತೆ ಲಕ್ಷಾಂತರ ರೂ ಬೆಲೆ ಬಾಳುವ ಆಭರಣಗಳನ್ನು ಕದ್ದು ಪರಾರಿಯಾಗಿದ್ದ.
ಈತನ ತಂಡದ ಬಗ್ಗೆ ಮಾಹಿತಿ ಕಲೆ ಹಾಕಿದ ಅಂದಿನ ಎಸೈ ನಂದ ಕುಮಾರ್ ಮತ್ತವರ ತಂಡ ಅಪಾಯಕಾರಿ ಕಾರ್ಯಾಚರಣೆಯನ್ನು ನಡೆಸಿ ರಾಜಸ್ಥಾನದಿಂದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿತ್ತು. ಬಂಧಿತ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಗೊಂಡು ಕಳೆದ ಮೂರು ವರ್ಷಗಳಿಂದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕಾರಣ ವಾರೆಂಟ್ ಹೊರಡಿಸಲಾಗಿದ್ದು, ಪೊಲೀಸ್ ಅಧಿಕಾರಿಗಳ ನಿರ್ದೇಶನದಂತೆ ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ರಾಜಸ್ಥಾನದಲ್ಲಿ ಪತ್ತೆ ಹಚ್ಚಿ ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ.
ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.





