ವಿಟಿವಿ ವಿಟ್ಲ ಸಾರಥ್ಯದಲ್ಲಿ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜ್ಞಾನದಾಟ ಮಕ್ಕಳ ಸ್ಪರ್ಧಾ ಕೂಟ ಕಾರ್ಯಕ್ರಮ: ಲಕ್ಕಿ ಕೂಪನ್ ವಿಜೇತ ವಿದ್ಯಾರ್ಥಿಗಳಾದ ದೈವಿಕ್ ಬಿ ಮತ್ತು ಶಿಫಾ ಫಾತಿಮಾರವರಿಗೆ ಗೇರ್ ಸೈಕಲ್ ವಿತರಣೆ
ಬಂಟ್ವಾಳ: ವಿಟಿವಿ ವಿಟ್ಲ ಸಾರಥ್ಯದಲ್ಲಿ ಜ್ಞಾನದಾಟ ಮಕ್ಕಳ ಸ್ಪರ್ಧಾ ಕೂಟ ಕಾರ್ಯಕ್ರಮ ಮಾಣಿ ಪೆರಾಜೆ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.

ಓದುವ ಹವ್ಯಾಸ ಮಕ್ಕಳಲ್ಲಿ ಹೆಚ್ಚಿಸುವ ಉದ್ದೇಶದ ಜೊತೆಗೆ ಪತ್ರಿಕಾ ಮತ್ತು ಮಾಧ್ಯಮ ರಂಗದ ಬಗ್ಗೆ ಮಕ್ಕಳಿಗೆ ತಿಳಿಯಪಡಿಸುವ ನಿಟ್ಟಿನಲ್ಲಿ ವಿಟಿವಿ ವಿಟ್ಲ ಸಾರಥ್ಯದಲ್ಲಿ ಜ್ಞಾನದಾಟ ಮಕ್ಕಳ ಸ್ಪರ್ಧಾ ಕೂಟ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. 1-4 ನೇ ತರಗತಿಯ ವಿಭಾಗ ಮತ್ತು 5-8 ನೇ ತರಗತಿ ವಿಭಾಗದ ಮಕ್ಕಳಿಗೆ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. ಒಟ್ಟು ಸಾವಿರಾರು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅವುಗಳಲ್ಲಿ ಮೊದಲು ನೊಂದಾಯಿತ ಒಟ್ಟು 200 ವಿದ್ಯಾರ್ಥಿಗಳನ್ನು ಈ ಸ್ಪರ್ಧೆಗೆ ಆಯ್ಕೆ ಮಾಡಲಾಗಿತ್ತು.
ಎಪ್ರಿಲ್ 13 ರಂದು ಬೆಳಗ್ಗೆ ಜ್ಞಾನದಾಟ ಮಕ್ಕಳ ಸ್ಪರ್ಧಾ ಕೂಟದ ಸಮಾರೋಪ ಸಮಾರಂಭದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ವಿಟವಿ ಆಡಳಿತ ನಿರ್ದೇಶಕರು ರಾಮ್ದಾಸ್ ಶೆಟ್ಟಿ ವಿಟ್ಲ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಹ್ಲಾದ ಶೆಟ್ಟಿ ಜೆ ಅಧ್ಯಕ್ಷರು, ಬಾಲವಿಕಾಸ ಟ್ರಸ್ಟ್ (ರಿ) ಮಾಣಿ, ಪತ್ರಿಕಾ ವರದಿಗಾರ, ಶಕ್ತಿ ನ್ಯೂಸ್ನ ಆಡಳಿತ ನಿರ್ದೇಶಕ ಗಣೇಶ್ ಕಲ್ಲರ್ಪೆ, ಕನ್ನಡ ಪ್ರಭ ದಿನಪತ್ರಿಕೆಯ ವರದಿಗಾರ ಮೌನೇಶ್ ವಿಶ್ವಕರ್ಮ ವೇದಿಕೆಲಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಬಳಿಕ ಮಕ್ಕಳಿಗೆ ವಿವಿಧ ಮನೋರಂಜನಾ ಚಟುವಟಿಕೆಗಳನ್ನು ನಡೆಸಲಾಯಿತು. ಬಳಿಕ ಲಕ್ಕಿ ಕೂಪನ್ ಡ್ರಾ ನಡೆಸಲಾಯಿತು.
1-4 ನೇ ತರಗತಿಯ ವಿಭಾಗದ ಮಕ್ಕಳಲ್ಲಿ ಲಕ್ಕಿ ಕೂಪನ್ ವಿಜೇತ ಎಸ್ವಿಎಸ್ ಟೆಂಪಲ್ ಆಂಗ್ಲ ಮಾಧ್ಯಮ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ ದೈವಿಕ್ ಬಿ. ಇವರಿಗೆ ಬಹುಮಾನವಾಗಿ ಗೇರ್ ಸೈಕಲ್ ವಿತರಿಸಲಾಯಿತು. 5-8 ನೇ ತರಗತಿ ವಿಭಾಗದ ಮಕ್ಕಳಲ್ಲಿ ವಿಜೇತ ಲಕ್ಕಿ ಕೂಪನ್ ವಿನ್ನರ್ ಜ್ಞಾನಭಾರತಿ ಶಾಲೆ ಉಪ್ಪಿನಂಗಡಿಯ ವಿದ್ಯಾರ್ಥಿನಿ ಶಿಫಾ ಫಾತಿಮಾ ಇವರಿಗೆ ಬಹುಮಾನವಾಗಿ ಗೇರ್ ಸೈಕಲ್ನ್ನು ವಿತರಿಸಲಾಯಿತು.
ಹಾಗೂ ಎಲ್ಲಾ ಮಕ್ಕಳಿಗೂ ಎಸ್ಎಲ್ವಿ ಬುಕ್ಹೌಸ್ ವತಿಯಿಂದ ನೀಡಲಾಗಿದ್ದ ಗಿಫ್ಟ್ ಬಾಕ್ಸ್ ಮತ್ತು ಸಪ್ತ ಜ್ಯುವೆಲ್ರವರು ನೀಡಿದ ಚಿನ್ನ ಖರೀದಿಯ ಡಿಸ್ಕೌಂಟ್ ಕೂಪನ್ ನೀಡಲಾಯಿತು. ಹಾಗೂ ಮೊದಲ ಸುತ್ತಿನಲ್ಲಿ ಆಯ್ಕೆಯಾದ 10 ಮಕ್ಕಳಿಗೆ ಕನ್ನಡ ಪ್ರಭ ದಿನಪತ್ರಿಕೆಯವರ ವತಿಯಿಂದ 1 ವರ್ಷದ ವಿಧ್ಯಾರ್ಥಿ ಪುರವಣಿ ಬಹುಮಾನ ನೀಡಲಾಯಿತು.
ಕಾರ್ಯಕ್ರಮದ ಬಗ್ಗೆ ಪೋಷಕರು ಮಾತನಾಡಿ “ಮಕ್ಕಳ ಜ್ಞಾನದ ಜೊತೆಗೆ ನಮ್ಮ ಜ್ಞಾನಕ್ಕೂ ಉತ್ತಮ ಮಾಹಿತಿಯನ್ನು ನೀಡಿದ್ದೀರಿ. ಹೆತ್ತವರು ಓದುವ ಹವ್ಯಾಸವನ್ನು ಹೆಚ್ಚಿಸಿಕೊಂಡರೆ ಮಕ್ಕಳೂ ಅದರಲ್ಲಿ ತೊಡಗಿಕೊಳ್ಳುತ್ತಾರೆ. ಇಂತಹ ವಿಭಿನ್ನ ಕಾರ್ಯಕ್ರಮ ಆಯೋಜಿಸಿದ ವಿಟಿವಿ ಹಾಗೂ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಮನಸ್ವಿನಿ ಪ್ರಾರ್ಥಿಸಿ, ಅಶ್ವಿನಿ ಪೆರುವಾಯಿ ಕಾರ್ಯಕ್ರಮ ನಿರೂಪಿಸಿದರು. ಪ್ರಭಾಕರ ಅಮೈ, ಶೈಲಶ್ರೀ ಸಂದೇಶ್, ಸ್ವರ್ಣಗೌರಿ, ಕನ್ನಡಪ್ರಭ ಪತ್ರಿಕೆಯ ಸೀನಿಯರ್ ಮಾರ್ಕೆಟಿಂಗ್ ಮ್ಯಾನೇಜರ್ ಪ್ರಶಾಂತ್ ನಿಡ್ಲೆ, ಪ್ರವೀಣ್ ನಾಯ್ಕ್ ಅನಂತಾಡಿ ಸಹಕರಿಸಿದರು.




