ಉಡುಪಿ: ಮಹಿಳಾ ಗ್ರಾಹಕಿಯ ಜೊತೆ ಅಸಭ್ಯವಾಗಿ ವರ್ತನೆ: ಬ್ಯಾಂಕ್ ಮ್ಯಾನೇಜರ್ ವಿರುದ್ಧ ಪ್ರಕರಣ ದಾಖಲು
ಉಡುಪಿ: ರಾಷ್ಟ್ರೀಯಕೃತ ಬ್ಯಾಂಕ್ ಒಂದರ ಆದಿ ಉಡುಪಿ ಶಾಖೆಯ ಮ್ಯಾನೇಜರ್, ಮಹಿಳಾ ಗ್ರಾಹಕಿಯೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪದ ಮೇರೆಗೆ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಜ್ಯೋತಿ ಎಂಬ ಮಹಿಳೆಯು ನೀಡಿದ ದೂರಿನ ಮೇರೆಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಫೆಬ್ರವರಿ 19 ರಂದು ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) 2023 ರ ಸೆಕ್ಷನ್ 74 ರ ಅಡಿಯಲ್ಲಿ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಆರಂಭವಾಗಿದೆ.
ಈ ಘಟನೆಯು ಫೆಬ್ರವರಿ 7 ರಂದು ಸಂಜೆ ಸುಮಾರು 5.30 ಕ್ಕೆ ನಡೆದಿದೆ. ಸಾಲದ ವಿಷಯದ ಬಗ್ಗೆ ಚರ್ಚಿಸಬೇಕೆಂದು ಹೇಳಿ ಮ್ಯಾನೇಜರ್ ತಮ್ಮನ್ನು ಕರೆಸಿಕೊಂಡಿದ್ದರು. ನಂತರ ಕಾರಿನೊಳಗೆ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೂರುದಾರ ಮಹಿಳೆ ಆರೋಪಿಸಿದ್ದಾರೆ.
ಈ ಘಟನೆಯಿಂದ ತಾವು ಮಾನಸಿಕವಾಗಿ ನೋಂದಿದ್ದು, ತಮ್ಮ ಘನತೆಗೆ ಧಕ್ಕೆಯುಂಟಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಮಧ್ಯಮ ಕುಟುಂಬದ ಹಿನ್ನೆಲೆಯುಳ್ಳ ಈ ಮಹಿಳೆಯು ಬ್ಯಾಂಕಿಂಗ್ ಕೆಲಸಕ್ಕಾಗಿ ಹಿರಿಯ ಅಧಿಕಾರಿಯನ್ನು ಸಂಪರ್ಕಿಸಿದಾಗ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಇದು ಮಹಿಳಾ ಗ್ರಾಹಕರ ಸುರಕ್ಷತೆಯ ಬಗ್ಗೆ ಆತಂಕ ಸೃಷ್ಟಿಸಿದೆ.
“ನ್ಯಾಯಾಂಗ ವ್ಯವಸ್ಥೆಯ ಮೇಲೆ ನನಗೆ ನಂಬಿಕೆಯಿದೆ, ನನಗೆ ನ್ಯಾಯ ಸಿಗಬೇಕು” ಎಂದು ದೂರುದಾರ ಮಹಿಳೆ ವಿನಂತಿಸಿದ್ದಾರೆ. ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಮೇಲೆ ಯಾವುದೇ ರೀತಿಯ ಒತ್ತಡ, ಬೆದರಿಕೆ ಅಥವಾ ಮಾನಹಾನಿ ಮಾಡುವ ಪ್ರಯತ್ನಗಳು ನಡೆಯದಂತೆ ರಕ್ಷಣೆ ನೀಡಬೇಕೆಂದು ಅವರು ಪೊಲೀಸ್ ಇಲಾಖೆಯನ್ನು ಕೋರಿದ್ದಾರೆ.




