ಉಳ್ಳಾಲ: ನೂತನ ಮಳಿಗೆಯ ಸಿದ್ಧತೆ ನಡೆಸುತ್ತಿದ್ದಾಗ ವಿದ್ಯುತ್ ಸ್ಪರ್ಶ: ಪಜೀರು ನಿವಾಸಿ ಮೃತ್ಯು
ಉಳ್ಳಾಲ: ನೂತನ ವಸ್ತ್ರಮಳಿಗೆಯ ಉದ್ಘಾಟನೆಗೆ ಸಿದ್ಧತೆ ನಡೆಸುತ್ತಿದ್ದ ಯುವಕನೊಬ್ಬ ಅದೇ ಮಳಿಗೆಯಲ್ಲಿ ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟ ಘಟನೆ ತೊಕ್ಕೊಟ್ಟುವಿನಲ್ಲಿ ರವಿವಾರ ರಾತ್ರಿ ನಡೆದಿದೆ.
ಮೃತರನ್ನು ಮೂಲತಃ ಪಜೀರು ಬೆಂಗೋಡಿ ಪದವು ನಿವಾಸಿ ಹಾಗೂ ಪ್ರಸ್ತುತ ಮಂಗಳೂರಿನ ಪಾಂಡೇಶ್ವರ ಶಿವನಗರದಲ್ಲಿ ವಾಸವಾಗಿದ್ದ ಸಲ್ಮಾನ್ ಫಾರಿಶ್ (20) ಎಂದು ಗುರುತಿಸಲಾಗಿದೆ.
ತೊಕ್ಕೊಟ್ಟುವಿನ ಖಾಸಗಿ ವಾಣಿಜ್ಯ ಸಂಕೀರ್ಣದಲ್ಲಿ ಸಲ್ಮಾನ್ ಫಾರಿಶ್ ಮಾಲಕತ್ವದಲ್ಲಿ ನೂತನ ವಸ್ತ್ರಮಳಿಗೆಯನ್ನು ಇದೇ ಶುಕ್ರವಾರ ಉದ್ಘಾಟಿಸಲು ನಿರ್ಧರಿಸಲಾಗಿತ್ತು. ಅದರ ಪೂರ್ವಸಿದ್ಧತಾ ಕಾರ್ಯಗಳ ಭಾಗವಾಗಿ ರವಿವಾರ ರಾತ್ರಿ ಮಳಿಗೆಯಲ್ಲಿ ವಿದ್ಯುತ್ ಸಂಪರ್ಕ ಸೇರಿದಂತೆ ವಿವಿಧ ಕೆಲಸಗಳು ನಡೆಯುತ್ತಿತ್ತು ಎನ್ನಲಾಗಿದೆ.




