ಬಜತ್ತೂರು: ಹಳೆನೇರಂಕಿ ಮಸೀದಿ ನವೀಕರಣ, ತಡೆಗೋಡೆಗೆ 25 ಲಕ್ಷ ಅನುದಾನ ಮಂಜೂರು: ಶಾಸಕ ಅಶೋಕ್ ರೈ
ಪುತ್ತೂರು: ಬಜತ್ತೂರು ಗ್ರಾಮದ ಹಳೆನೇರಂಕಿ ಮುಹಿಯುದ್ದೀನ್ ಜುಮಾ ಮಸೀದಿಗೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಿಂದ 25 ಲಕ್ಷ ರೂ. ಮಂಜೂರುಗೊಂಡಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಈ ಮಸೀದಿಯು ಅತ್ಯಂತ ಹಳೆಯ ಕಾಲದ ಮಸೀದಿಯಾಗಿದೆ. ಮಸೀದಿ ಕಟ್ಟಡವು ಶಿಥಿಲಾವಸ್ಥೆಯಲ್ಲಿರುವ ಕಾರಣ ನವೀಕರಣಕ್ಕೆ ಅನುದಾನ ಒದಗಿಸುವಂತೆ ಮಸೀದಿ ಆಡಳಿತ ಸಮಿತಿ ಶಾಸಕರಿಗೆ ಮನವಿ ಮಾಡಿದ್ದರು. ಇದಲ್ಲದೆ ಮಸೀದಿಯ ಬಳಿ ಆವರಣಗೋಡೆ ಅಗತ್ಯವಾಗಿ ಬೇಕಾಗಿದ್ದು ಇದಕ್ಕೆ ಅನುದಾನ ನೀಡುವಂತೆ ಮನವಿ ನೀಡಿದ್ದರು.
ಗುರುವಾರ ವಕಫ್, ಅಲ್ಪ ಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹ್ಮದ್ ರವರನ್ನು ಭೇಟಿಯಾದ ಶಾಸಕ ಅಶೋಕ್ ರೈ ಅವರು ಅನುದಾನ ಒದಗಿಸುವ ಬಗ್ಗೆ ಸಚಿವರಲ್ಲಿ ಮಾತುಕತೆ ನಡೆಸಿ ಮನವಿ ಸಲ್ಲಿಸಿದ್ದರು. ಮಸೀದಿ ನವೀಕರಣಕ್ಕೆ 15 ಲಕ್ಷ ಹಾಗೂ ಆವರಣಗೋಡೆ ನಿರ್ಮಾಣಕ್ಕೆ 10 ಲಕ್ಷ ರೂ. ಅನುದಾನವನ್ನು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಮಂಜೂರುಗೊಳಿಸಲಾಗಿದೆ.




