ಮೊಗರ್ನಾಡು ದೇವ ಮಾತೆಯ ದೇವಾಲಯದ 250 ನೇ ಜ್ಯುಬಿಲಿ ವರ್ಷಾಚರಣೆಯ ಸಂಭ್ರಮ: ದೇವಾಲಯದ ಸರ್ವ ಭಕ್ತಾಭಿಮಾನಿಗಳಿಗೆ ಮೊಗರ್ನಾಡ್ ನಿಂದ ಮೋಡಂಕಾಪು ವರೆಗೆ ಭವ್ಯ ಪಾದಯಾತ್ರೆ
ವಿಟ್ಲ: ಬಂಟ್ವಾಳ ತಾಲೂಕಿನ ಮೊಗರ್ನಾಡು ದೇವ ಮಾತೆಯ ದೇವಾಲಯದ 250 ನೇ ಜ್ಯುಬಿಲಿ ವರ್ಷಾಚರಣೆ ಪ್ರಯುಕ್ತ ದೇವಾಲಯದ ಸರ್ವ ಭಕ್ತಾಭಿಮಾನಿಗಳಿಗೆ ಯಾತ್ರಿಕ ಪಾದಯಾತ್ರೆ ನಡೆಯಿತು.
ದೇವ ಮಾತೆಯ ದೇವಾಲಯ ಮೊಗರ್ನಾಡಿನಿಂದ ಹೊರಟು ಬಾಲ ಏಸುವಿನ ದೇವಾಲಯ ಮೊಡಂಕಾಪು ತನಕ ಅದ್ಭುತಪೂರ್ವ ಭವ್ಯ ಪಾದಯಾತ್ರೆಯ ಮೆರವಣಿಗೆ ನಡೆಯಿತು.
ಮೊಗರ್ನಾಡು ದೇವಾಲಯದ ಗ್ಲೋರಿಯಾ ವಲಯ, ಜೆರುಸಲೆಮ್ ವಲಯ, ರಿಜೋಯ್ಸ್ ವಲಯ, ಬೆತ್ಲೆಹೆಮ್ ವಲಯ ಮತ್ತು ಹೊಸನ್ನಾ ವಲಯದ ಮಕ್ಕಳು, ಯುವಜನರು ಮತ್ತು ಹಿರಿಯರು ಸೇರಿದಂತೆ ಸುಮಾರು 1000 ಮಂದಿ ಭಕ್ತಾಭಿಮಾನಿಗಳು ಬೊಳ್ಳಾಯಿ – ಮೆಲ್ಕಾರ್ – ಪಾಣೆ ಮಂಗಳೂರು – ಬಿ.ಸಿ ರೋಡ್ ಮಾರ್ಗದ ಮೂಲಕ ಬಿಸಿಲನ್ನು ಲೆಕ್ಕಿಸದೆ ಪಾದಯಾತ್ರೆಯ ಮೂಲಕ ಹೊರಟರು.
ಸಂಜೆ 5.45 ಗಂಟೆಗೆ ಬಾಲ ಯೇಸುವಿನ ದೇವಾಲಯ ಮೊಡಂಕಾಪು ಇಲ್ಲಿ ಮಂಗಳೂರು ಪ್ರಾಂತ್ಯದ ಅl ವಂ| ಧಮಾಧ್ಯಕ್ಷರು ಲೂವಿಸ್ ಪಾವ್ಲು ಸೋಜ್ ನಿವೃತ್ತ ಧರ್ಮಾಧ್ಯಕ್ಷರು ದಿವ್ಯ ಬಲಿ ಪೂಜೆಯನ್ನು ನೆರವೇರಿಸಿದರು.
ಮೊಗರ್ನಾಡು ದೇವಾಲಯದ ವಂದನೀಯ ಫಾದರ್ ಅನಿಲ್ ಕೆನ್ಯೂಟ್ ಡಿಮೆಲ್ಲೊ, ಅಮ್ಟೂರು ದೇವಮಾತಾ ಶಾಲೆಯ ಮುಖ್ಯೋಪಾಧ್ಯಾಯರಾದ ವಂದನೀಯ ಫಾದರ್ ನವೀನ್ ಪ್ರಕಾಶ್ ಪಿಂಟೋ, ವಂದನೀಯ ಫಾದರ್ ಹೆರಿ ಡಿಸೋಜ, ವಂದನೀಯ ಫಾದರ್ ಆ್ಯಂಟನಿ ಲೂವಿಸ್ , ವಂದನೀಯ ಫಾದರ್ ವಿಕ್ಟರ್ ಡಿಸೋಜ , ವಂದನೀಯ ಫಾದರ್ ಲ್ಯಾನ್ಸಿ, ವಂದನೀಯ ಫಾದರ್ ಸಿಲೆಸ್ಟರ್ ವಿನ್ಸೆಂಟ್ ಲೋಬೋ, ವಂದನೀಯ ಫಾದರ್ ಸೈಮನ್ ಡಿಸೋಜ , ಬ್ರದರ್ ಅವಿಲ್ ಸಾಂತುಮಾರ್, ಬ್ರದರ್ ಪ್ರಿಸ್ಟನ್ ಬಲಿ ಪೂಜೆಯಲ್ಲಿ ಉಪಸ್ಥಿತರಿದ್ದರು.
ವಂದನೀಯ ಫಾದರ್ ಹೆರಿ ಡಿಸೋಜರವರು ಆಶೀರ್ವಚನ ನೀಡಿ ಯಾರೆಲ್ಲ ಅಷ್ಟ ಭಾಗಿಗಳ ಹಾಗೆ ಜೀವಿಸುತ್ತಾರೋ ಅವರು ಶಾಶ್ವತವಾಗಿಯೂ ಜೀವಿಸುತ್ತಾರೆ. ದೇವರ ಮೇಲೆ ಸಂಪೂರ್ಣವಾದ ಭರವಸೆಯನ್ನು ಇಟ್ಟು ಬದುಕಬೇಕು. ಪೂರ್ವಜರು ನಮ್ಮಿಂದ ದೂರವಿದ್ದರೂ ಅವರ ಆತ್ಮಕ್ಕೆ ಸದಾ ಪ್ರಾರ್ಥಿಸಬೇಕು. ನಾವು ಕೂಡಾ ಒಂದು ದಿವಸ ಪೂರ್ವಜರಿದ್ದ ಸ್ಥಳಕ್ಕೆ ಹೋಗಲಿರುವುದರಿಂದ ಪೂರ್ವಜರು ಕಲಿಸಿದ ಆದರ್ಶ ಪಾಠಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು. ದೇವರ ವಾಕ್ಯದ ಕೃಪೆಯಿಂದ ನಮ್ಮ ಜೀವನವನ್ನು ನಾವು ಮುಂದುವರಿಸಬೇಕು ಎಂದು ತಿಳಿಸಿದರು.
ಮಂಗಳೂರು ಪ್ರಾಂತ್ಯದ ಅl ವಂ| ಧಮಾಧ್ಯಕ್ಷರು ಲೂವಿಸ್ ಪಾವ್ಲು ಸೋಜ್ ಅವರು ಮಾತನಾಡಿ ಮೊಗರ್ನಾಡು ದೇವಾಲಯದಿಂದ ಮೊಡಂಕಾಪು ದೇವಾಲಯದ ಕಡೆಗೆ ಪಾದಯಾತ್ರೆಯ ಮೂಲಕ ನಡೆದು ಬಂದ ಎಲ್ಲಾ ಯಾತ್ರಾರ್ಥಿಗಳಿಗೆ ಶುಭಹಾರೈಸಿ ನಿಶ್ಚಿತ ದಿನದಂದು ಪೂರ್ವಜರ ವಾಸಸ್ಥಳಕ್ಕೆ ಭೇಟಿ ನೀಡುವ ನಿಮ್ಮ ಉದ್ದೇಶ ಮೆಚ್ಚುವಂತಹದ್ದು. ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ. ಒಳ್ಳೆಯ ಕಾರ್ಯಕ್ಕೆ ದೇವರ ಕೃಪಾ ದೃಷ್ಟಿ ಸದಾ ಇರುತ್ತದೆ ಜ್ಯುಬಿಲಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಪೂಜೆಯ ನಂತರ ಪೂರ್ವಜರ ಸಮಾಧಿಯ ಸ್ಥಳಕ್ಕೆ ಭೇಟಿ ನೀಡಿ ಎಲ್ಲಾ ಪೂರ್ವಜರ ಆತ್ಮಕ್ಕೆ ಶಾಂತಿಯನ್ನು ಕೋರಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಮೊಗರ್ನಾಡು ಚರ್ಚಿನ ಉಪಾಧ್ಯಕ್ಷರಾದ ಸಂತೋಷ್ ಡಿಸೋಜ, ಕಾರ್ಯದರ್ಶಿ ವಿಲ್ ಫ್ರೆಡ್ ಲೋಬೋ, 21 ಆಯೋಗದ ಸಂಯೋಜಕರಾದ ಎಮಿಲಿಯಾನಾ ಡಿಕುನ್ತಾ,ಬಾಲ ಏಸುವಿನ ದೇವಾಲಯ ಮೊಡಂಕಾಪು ಇಲ್ಲಿನ ಉಪಾಧ್ಯಕ್ಷರಾದ ಸುನಿಲ್ ವೇಗಸ್ ,ಕಾರ್ಯದರ್ಶಿ ಮನೋಹರ ಡಿಕೋಸ್ತಾ, 21 ಆಯೋಗಾಚಿ ಸಂಯೋಜಕಿ ವೀಣಾ ಗೋವಿಯಸ್, ಅಮ್ಟೂರ್ ದೇವಮಾತಾ ಕಾನ್ವೆಂಟಿನ ಸಿಸ್ಟರ್ ಆ್ಯನ್ನಿ, ಚರ್ಚ್ ಪಾಲನಾ ಮಂಡಳಿ ಜ್ಯುಬಿಲಿ ಸಮಿತಿಯ ಸಂಚಾಲಕರು ಮತ್ತು ಸದಸ್ಯರು, ಮೊಗರ್ನಾಡು ದೇವಾಲಯದ ಕುಟುಂಬದ ಸದಸ್ಯರು, ಮೊಡಂಕಾಪು ದೇವಾಲಯದ ಸದಸ್ಯರು ಹಾಗೂ ಬಾಂಬಿಲ ಪದವು ದೇವಾಲಯದ ಸದಸ್ಯರು ಪಾಲ್ಗೊಂಡಿದ್ದರು.
ಮಂಗಳೂರು ಪ್ರಾಂತ್ಯದ ಅl ವಂ|ಧಮಾಧ್ಯಕ್ಷರು ಲೂವಿಸ್ ಪಾವ್ಲು ಸೋಜ್ ನಿವೃತ್ತ ಧರ್ಮಾಧ್ಯಕ್ಷರು ಇವರಿಗೆ ಮತ್ತು ಮೊಡಂಕಾಪು ದೇವಾಲಯದ ಧರ್ಮಗುರುಗಳಾದ ವಿಕ್ಟರ್ ಡಿಸೋಜ ಇವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಪಾದಯಾತ್ರೆಯ ಸಮಯದಲ್ಲಿ ಮೊಡಂಕಾಪು ಚರ್ಚಿನ ಸಂತ ಅಂತೋನಿ ವಾಳೆಯ ಗುರಿಕಾರರು ಮತ್ತು ಸರ್ವ ಕುಟುಂಬಸ್ಥರಿಂದ ಹಾಗೂ ಮೊಗರ್ನಾಡ್ ದೇವಾಲಯದ ಹೊಸನ್ನಾ ವಲಯದಿಂದ, ಮೊಗರ್ನಾಡು ದೇವಾಲಯದ ವತಿಯಿಂದ ಎಲ್ಲಾ ಪಾದಯಾತ್ರೆಯಲ್ಲಿ ಪಾಲ್ಗೊಂಡವರಿಗೆ ಪಾನೀಯದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಸೌಹಾರ್ದತೆಯ ದ್ಯೋತಕವಾಗಿ ಬೊಳ್ಳಾಯಿ ಮುಸ್ಲಿಂ ಬಾಂಧವರು ಪಾದಯಾತ್ರೆಯಲ್ಲಿ ಭಾಗವಹಿಸಿದ ಎಲ್ಲರಿಗೂ ತಂಪಾದ ಪಾನೀಯ ನೀಡಿದ್ದು ವಿಶೇಷವಾಗಿತ್ತು ಮತ್ತು ಎಲ್ಲರ ಗಮನ ಸೆಳೆದಿತ್ತು.
ವಂದನೀಯ ಫಾದರ್ ಅನಿಲ್ ಕೆನ್ಯೂಟ್ ಡಿಮೆಲ್ಲೊ ಧನ್ಯವಾದ ಸಮರ್ಪಣೆ ಮಾಡಿದರು. ಮೊಡಂಕಾಪು ಚರ್ಚಿನ ವತಿಯಿಂದ ಆಗಮಿಸಿದ ಎಲ್ಲರಿಗೂ ಫಲಾಹಾರದ ವ್ಯವಸ್ಥೆಯನ್ನು ಮಾಡಿದ್ದರು.







